ಮನೆಯಲ್ಲಿದ್ದ ಚಿನ್ನಾಭರಣ ಬೈಕ್ ಸಮೇತ ಗಾರೆ ಕೆಲಸಗಾರರು ಪರಾರಿ,
ಅಂತರರಾಜ್ಯ ಇಬ್ಬರು ಕಳ್ಳರನ್ನ ಬಂಧಿಸಿದ ದೊಡ್ಡಬಳ್ಳಾಪುರ ಪೊಲೀಸರು
ಮನೆ ಕಟ್ಟಲು ಬಿಹಾರದಿಂದ ಬಂದಿದ್ದ ಇಬ್ಬರು ಗಾರೆ ಕೆಲಸಗಾರರು, ಮನೆ ಮಾಲೀಕನ ಮನೆಯ ಬೀರುವಿನಲ್ಲಿಟ್ಟದ ಚಿನ್ನಾಭರಣ, 1 ಲಕ್ಷದ ನಗದು ಹಣ ಮತ್ತು ಬೈಕ್ ಸಮೇತ ಪರಾರಿಯಾಗಿದ್ದರು, ಇಬ್ಬರು ಕಳ್ಳರನ್ನ ಬಂಧಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಆರೋಪಿಗಳಿಂದ 11.42 ಲಕ್ಷಹಣ ಮತ್ತು ಬೈಕ್ ಅನ್ನು ಜಪ್ತಿ ಮಾಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಮೋಪರಹಳ್ಳಿಯ ಸರಳ ಎಂಬುವರ ಮನೆಯಲ್ಲಿ ಮೇ 15 ರಂದು ಕಳ್ಳತನ ಕೃತ್ಯ ನಡೆದಿದ್ದು, ಪ್ರಕರಣ ಸಂಬಂಧಿಸಿದಂತೆ ಆರೋಪಿಗಳಾದ ಗೌರವ್ ಕುಮಾರ್ (19), ವಿಶಾಲ್ ಕುಮಾರ್ (22) ಬಂಧಿಸಲಾಗಿದೆ, ಆರೋಪಿಗಳು ಬಿಹಾರ ರಾಜ್ಯದ ಖಾಗರಿಯಾ ಜಿಲ್ಲೆಯ ಕಾಜಿಚಾಕ್ ಗ್ರಾಮದವರು.
ದೂರುದಾರರಾದ ಸರಳ ತಾವು ವಾಸವಾಗಿದ್ದ ಮನೆಯ ಪಕ್ಕದಲ್ಲಿ ಮನೆಯನ್ನ ಕಟ್ಟುತ್ತಿದ್ದರು, ಮನೆ ಕಟ್ಟುವ ಕೆಲಸಕ್ಕಾಗಿ ಬಿಹಾರದಿಂದ ವಿಶಾಲ್ ಕುಮಾರ್ ಮತ್ತು ಗೌರವ್ ಕುಮಾರ್ ಬಂದಿದ್ದು, ಕಟ್ಟುತ್ತಿದ್ದ ಮನೆಯಲ್ಲಿಯೇ ವಾಸವಾಗಿದ್ದರು, ಆರೋಪಿಗಳು ಸರಳ ಮನೆಗೂ ಬಂದು ಹೋಗುತ್ತಿದ್ದರು ಈ ವೇಳೆ ಅವರು ಚಿನ್ನಾಭರಣ ಇಡುತ್ತಿದ್ದ ಜಾಗವನ್ನು ನೋಡಿಕೊಂಡಿದ್ದರು,
ಮೇ 15 ರಂದು ಸರಳ ಮತ್ತು ಆಕೆಯ ಪತಿ ಕೆಲಸ ನಿಮಿತ್ತ ದೊಡ್ಡಬಳ್ಳಾಪುರ ನಗರಕ್ಕೆ ತೆರಳಿದ್ದಾರೆ, ಮನೆಗೆ ವಾಪಸ್ ಬಂದ ಅವರು ಸಿಲಿಂಡರ್ ಡಿಲಿವರಿ ಮಾಡಿದ ಹುಡುಗನಿಗೆ ಹಣ ಕೊಡಲು ಬೀರುವನ್ನು ತೆಗೆದಾಗ ಬೀರುವಿನಲ್ಲಿದ್ದ 55 ಗ್ರಾಂ ಚಿನ್ನದ ಲಾಂಗ್ ಚೈನ್, 30 ಗ್ರಾಂ ಚಿನ್ನದ ನೆಕ್ಲೇಸ್, 1 ಲಕ್ಷ ನಗದು ಹಣ ಮತ್ತು ಬೈಕ್ ಕಳವಾಗಿತ್ತು, ಮನೆಯ ಸಿಸಿ ಟಿವಿ ಕ್ಯಾಮಾರ ಪರಿಶೀಲನೆ ಮಾಡಿದ್ದಾಗ ಗಾರೆ ಕೆಲಕ್ಕೆ ಬಂದಿದ್ದ ವಿಶಾಲ್ ಮತ್ತು ಗೌರವ್ ಬೈಕ್ ಸಮೇತ ಪರಾರಿಯಾಗುವ ದೃಶ್ಯ ಸೆರೆಯಾಗಿರುವುದು ಪತ್ತೆಯಾಗಿದೆ.
ಮನೆಗಳ್ಳರನ್ನ ಬಂಧಿಸುವಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ತಂಡ ಯಶಸ್ವಿಯಾಗಿದ್ದು, ಇನ್ಸ್ ಪೇಕ್ಟರ್ ಡಾ. ನವೀನ್ ಕುಮಾರ್.ಎಂ.ಬಿನೇತೃತ್ವದ ಪೊಲೀಸ್ ತಂಡದ ಪಿಎಸ್ ಐ ನಾರಾಯಣಸ್ವಾಮಿ, ಸುಮಂತ್, ಹೆಡ್ ಕಾನ್ಸ್ ಟೇಬಲ್ ಗಳಾದ ರಂಗನಾಥ್, ಸುನೀಲ್ ಬಾಸಗಿ, ಹರೀಶ್, ಮಂಜುನಾಥ್, ಚಂದ್ರಶೇಖರ್, ನಟರಾಜು, ಸಚಿನ್ ಉಪ್ಪಾರ ಮತ್ತು ತಾಂತ್ರಿಕ ಸಿಬ್ಬಂದಿ ಪ್ರಮುಖ ಪಾತ್ರ ವಹಿಸಿದ್ದರು.








