ದೊಡ್ಡಬಳ್ಳಾಪುರ: ಶಾಲಾ ಅವರಣದಲ್ಲಿನ ಗಂಧದ ಮರಗಳನ್ನ ಮಧ್ಯರಾತ್ರಿ ಸಮಯದಲ್ಲಿ ಕಟಾವ್ ಮಾಡಿ ಕಳವು ಮಾಡಿದ್ದರು, ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ನಗರ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.
ಮೇ 13ರ ಮಧ್ಯರಾತ್ರಿ ಕಛೇರಿ ಪಾಳ್ಳಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ, ದರ್ಗಾ ಮೊಹಲ್ಲಾ ಬಳಿಯ ಮಸೀದಿ ಮತ್ತು ಸ್ಮಶಾನ ಜಾಗದಲ್ಲಿ ಬೆಳೆದಿದ್ದ ಗಂಧದ ಮರಗಳನ್ನ ಕಳವು ಮಾಡಲಾಗಿತ್ತು. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ದೊಡ್ಡಬಳ್ಳಾಪುರ ನಗರ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಮೈಸೂರು ಮೂಲದ ವೆಂಕಟೇಶ್ (26) ಹಾಗೂ ತುಮಕೂರು ಮೂಲದ ಅರುಣ್ (34) ಎಂದು ಗುರುತಿಸಲಾಗಿದೆ. ಇಬ್ಬರೂ ದೊಡ್ಡಬಳ್ಳಾಪುರ ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ವೃತ್ತಿಯಲ್ಲಿ ಬುಟ್ಟಿ ತಯಾರಿಕೆ ಕೆಲಸ ಮಾಡುತ್ತಿದ್ದವರು. ಜೂನ್ 13ರ ಮಧ್ಯರಾತ್ರಿ ಕೃತ್ಯ ಎಸಗಿದ್ದಾರೆ. ಗಂಧದ ಮರಗಳನ್ನ ಕಟಾವ್ ಮಾಡಿದ ಆರೋಪಿಗಳು ಬೇರೆಡೆ ಸಾಗಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳ ಸುಳಿವು ಪತ್ತೆಹಚ್ಚಿದ್ದಾರೆ.ಆರೋಪಿಗಳಿಂದ ಕಳವು ಮಾಡಿದ 200 ಕೆ.ಜಿ ತೂಕದ 13 ಗಂಧದ ಮರದ ತುಂಡುಗಳು, ಸ್ಯಾಂಟ್ರೋ ಕಾರು ಮತ್ತು ಪೆಟ್ರೋಲ್ ಚಾಲಿತ ಗರಗಸವನ್ನ ಜಪ್ತಿ ಮಾಡಿದ್ದಾರೆ.
ಆರೋಪಿಗಳನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾದ ಪೊಲೀಸ್ ತಂಡವನ್ನ ಶ್ಲಾಘಿಸಲಾಗಿದೆ, ಇನ್ಸ್ ಪೇಕ್ಟರ್ ಮುತ್ತುರಾಜ್ ನೇತೃತ್ವದ ತಂಡದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಕೃಷ್ಣಮೂರ್ತಿ, ಪಾಡುರಂಗ, ಹುಸೇನ್ ಸಾಬ್, ಶಿವಾನಂದ್, ಪ್ರದೀಪ್, ಮುನಿರಾಜು, ರೂಪೇಶ್ ಯಾದವ್ ಇದ್ದರು







