ಬಂಧಿತ ಆರೋಪಿಯಿಂದ ಬರೋಬ್ಬರಿ 37 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಡಿಜಿಟಲ್ ತಂತ್ರಜ್ಞಾನದ ನೆರವಿನಿಂದ ಪೊಲೀಸರು ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.ಮೇ 16, 2026 ರಂದು ಶ್ರೀಮತಿ ಮೃಗ್ನಯಾನಿ ಆರ್ ದಿಯೋಕರ್ ಎಂಬುವವರು ತಮ್ಮ ಗ್ರೇ ಬಣ್ಣದ ಸುಜುಕಿ ಆಕ್ಸಿಸ್ ದ್ವಿಚಕ್ರ ವಾಹನ (KA-05-KC-4029) ಕಳ್ಳತನವಾಗಿರುವ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಬಿ.ಎನ್.ಎಸ್-2023 ರ ಕಲಂ 303(2) ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡ ಜಯನಗರ ಪೊಲೀಸರು ತನಿಖೆ ಆರಂಭಿಸಿದ್ದರು.ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಹಾಗೂ ಎಫ್.ಓ.ಪಿ. ನೇತ್ರಾ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕಳ್ಳತನವಾದ ಬೈಕ್ ಚಲಿಸಿದ ಮಾರ್ಗ ಪತ್ತೆಯಾಗಿದೆ. ಇದು ಪೊಲೀಸರನ್ನು ನೇರವಾಗಿ ಶಿವಾಜಿನಗರದ ಏರಿಯಾಕ್ಕೆ ತಲುಪುವಂತೆ ಮಾಡಿತು.ಆರೋಪಿಯು ಬೈಕ್ ಕದಿಯುವ ಸ್ಥಳಕ್ಕೆ ಹೋಗಲು ‘ರಾಪಿಡೋ’ ಬೈಕ್ ಬುಕ್ ಮಾಡುತ್ತಿದ್ದ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಈ ರಾಪಿಡೋ ಬುಕಿಂಗ್ ಹಿಸ್ಟರಿ ಪ್ರಮುಖ ಡಿಜಿಟಲ್ ಸಾಕ್ಷ್ಯವಾದರೆ, ಆತನ ಮೊಬೈಲ್ ನಂಬರ್ನ ಸಿಡಿಆರ್ (Call Detail Record) ಆರೋಪಿಯ ನಿಖರ ಸ್ಥಳವನ್ನು ಪತ್ತೆಹಚ್ಚಲು ನೆರವಾಗಿದೆ.
ಪೊಲೀಸರು ಶಿವಾಜಿನಗರದ ಕಾಕ್ ಬರ್ನ್ ರಸ್ತೆಯ ನಿವಾಸಿ, 29 ವರ್ಷದ ಸಲ್ಮಾನ್ ಮೆಹಬೂಬ್ ಅಲಿಯಾಸ್ ಬಿಲಾಲ್ ಎಂಬಾತನನ್ನು ಕದ್ದ ಬೈಕ್ ಸಮೇತ ವಶಕ್ಕೆ ಪಡೆದಿದ್ದಾರೆ.
ಕಳ್ಳತನದ ಬೈಕ್ ಮಾರಾಟ ಜಾಲ: ಈತ ಕದ್ದ ಬೈಕ್ಗಳಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿ, ಅವುಗಳನ್ನು OLX ಮತ್ತು ಫೇಸ್ಬುಕ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ. ಗ್ರಾಹಕರಿಂದ ಒಂದಿಷ್ಟು ಹಣವನ್ನು ನಗದಾಗಿ, ಮತ್ತೊಂದಿಷ್ಟು ಹಣವನ್ನು PhonePe ಮೂಲಕ ಪಡೆಯುತ್ತಿದ್ದ. ಈತನ ಬ್ಯಾಂಕ್ ಸ್ಟೇಟ್ಮೆಂಟ್ ಪರಿಶೀಲಿಸಿದಾಗ ಈತ ನಡೆಸಿರುವ ಇಡೀ ಕಳ್ಳತನದ ಜಾಲ ಬಯಲಾಗಿದೆ.

ಬಂಧಿತ ಆರೋಪಿಯಿಂದ ಬೆಂಗಳೂರಿನ ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ, ಆಗ್ನೇಯ ಹಾಗೂ ಕೇಂದ್ರ ವಿಭಾಗದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನ ಮಾಡಲಾಗಿದ್ದ ಒಟ್ಟು 37 ದ್ವಿಚಕ್ರ ವಾಹನಗಳನ್ನು ಪೊಲೀಸರು ಸದ್ಯ ವಶಪಡಿಸಿಕೊಂಡಿದ್ದಾರೆ.
ದಕ್ಷಿಣ ವಿಭಾಗದ ಉಪ-ಪೊಲೀಸ್ ಆಯುಕ್ತರಾದ (DCP) ಶ್ರೀ ಡಾ. ಕೆ. ವಂಶಿಕೃಷ್ಣ ಐ.ಪಿ.ಎಸ್ ಮಾರ್ಗದರ್ಶನದಲ್ಲಿ ಹಾಗೂ ಜಯನಗರ ಉಪ-ವಿಭಾಗದ ಎಸಿಪಿ ಶ್ರೀ ಲಕ್ಷ್ಮೀನಾರಾಯಣ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ; ಜಯನಗರ ಇನ್ಸ್ಪೆಕ್ಟರ್ ಶ್ರೀ ಎಂ.ಎಲ್. ಗಿರೀಶ್, ಪಿಎಸ್ಐ ಶ್ರೀ ಹರಿಪ್ರಸಾದ್ ಬಿ.ಎಸ್ ಹಾಗೂ ಸಿಬ್ಬಂದಿಗಳಾದ ಅನಂತ್ರೆಡ್ಡಿ, ರಾಜಕುಮಾರ್ ಬಿರಾದಾರ್, ಆನಂದ್ಕುಮಾರ್, ಚೇತನ್ ಕುಮಾರ್, ರಮೇಶ್, ಹನುಮಂತ, ದೀಕ್ಷಿತ್ ಮತ್ತು ಆಶಾರಾಣಿ ನಾಗರಾಜ್ ಹಂಡರಗಲ್ ಅವರು ಶ್ರಮಿಸಿದ್ದಾರೆ.
ಇಡೀ ಜಾಲವನ್ನು ಅತ್ಯಂತ ಚಾಣಾಕ್ಷತನದಿಂದ ಭೇದಿಸಿದ ಈ ತಂಡದ ಅತ್ಯುತ್ತಮ ಕಾರ್ಯವನ್ನು ಪೊಲೀಸ್ ಉನ್ನತಾಧಿಕಾರಿಗಳು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.






