ದಿನಾಂಕ:18/08/2026 ರಂದು ಫಿರ್ಯಾದುದಾರರು ಠಾಣೆಗೆ ಹಾಜರಾಗಿ ದಿನಾಂಕ:27/08/2026 ರಿಂದ ದಿನಾಂಕ:08/08/2026 ರ ನಡುವೆ ನಮ್ಮ ಮನೆಯಲ್ಲಿದ್ದ ಸುಮಾರು 145 ಗ್ರಾಂ ತೂಕದ ಚಿನ್ನಾಭರಣಗಳು ಕಳ್ಳತನವಾಗಿರುತ್ತವೆ. ನಮ್ಮ ಮನೆಯಲ್ಲಿ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿಯು ನಮ್ಮ ಮನೆಯಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಅನುಮಾನ ಇರುತ್ತದೆ ಎಂದು ನೀಡಿದ ದೂರಿನ ಮೇರೆಗೆ ತಲಘಟ್ಟಪುರ ಪೊಲೀಸ್ ಠಾಣೆ ಮೊ.ಸಂ 302/2026 ಕಲಂ 306 ಬಿ.ಎನ್.ಎಸ್ ಪ್ರಕರಣ ದಾಖಲಾಗಿರುತ್ತದೆ.
ನಂತರ ತಲಘಟ್ಟಪುರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ತನಿಖೆ ಕೈಗೊಂಡು, ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಮಾಡಿ, ವಿಚಾರಣೆ ಮಾಡಿ, ಆರೋಪಿಯು ಫಿರ್ಯಾದುದಾರರ ಮನೆಯಲ್ಲಿ ಕಳ್ಳತನ ಮಾಡಿದ್ದ ಚಿನ್ನಾಭರಣಗಳನ್ನು ಕರಗಿಸಿ ಚಿನ್ನದ ಗಟ್ಟಿ ಮಾಡಿ, ಮಾರಾಟ ಮಾಡಿದ್ದ ಸುಮಾರು 17,00,000/-ರೂ ಮೌಲ್ಯದ ಒಟ್ಟು ಸುಮಾರು 110ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ಅಮಾನತ್ತುಪಡಿಸಿಕೊಂಡಿರುತ್ತದೆ.
ಆರೋಪಿಯು ಈ ಹಿಂದೆ ಇದೇ ರೀತಿ ಹೈದರಾಬಾದ್ನಲ್ಲಿ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದ ಮನೆಗಳಲ್ಲಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದು, ಈ ಬಗ್ಗೆ ಹೈದರಾಬಾದ್ನ ಮಧುರಾ ನಗರ ಪೊಲೀಸ್ ಠಾಣೆಯಲ್ಲಿ 03 ಪ್ರಕರಣಗಳು, ಬೆಂಗಳೂರು ನಗರದ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ 01 ಪ್ರಕರಣ ದಾಖಲಾಗಿರುತ್ತವೆ. ಆರೋಪಿಯು ಐಷಾರಾಮಿ ಜೀವನ ನಡೆಸಲು ಕೇರ್ ಟೇಕರ್ ಆಗಿ ಕೆಲಸ ಮಾಡುವ ನೆಪದಲ್ಲಿ ವಯಸ್ಸಾದ ಹಿರಿಯ ನಾಗರೀಕರ ಮನೆಗಳಿಗೆ ಹೋಗಿ, ಮನೆಯಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗುವ ಪ್ರವೃತ್ತಿಯುಳ್ಳವನಾಗಿರುತ್ತಾನೆ.

ಈ ಪ್ರಕರಣವನ್ನು ಬೆಂಗಳೂರು ನೈಋತ್ಯ ವಿಭಾಗದ ಉಪ ಪೊಲೀಸ್ ಕಮೀಷನರ್ ಶ್ರೀಮತಿ ಅನಿತಾ ಬಿ ಹದ್ದಣ್ಣವರ್ ಐ.ಪಿ.ಎಸ್ಇವರ ಮಾರ್ಗದರ್ಶನದಲ್ಲಿ ಸುಬ್ರಮಣ್ಯಪುರ ಉಪ-ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಶ್ರೀ ಗೋಪಾಲ ಡಿ ಜೋಗೀನರವರ ನೇತೃತ್ವದಲ್ಲಿ, ತಲಘಟ್ಟಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಆರ್.ಎಸ್ ಚೌಧರಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀ ಗಜಾನನ ಮಾಳಿ, ಸಿಬ್ಬಂದಿಯವರಾದ ತುಳಸಿದಾಸ್, ವಿಶ್ವನಾಥ್, ಗಣೇಶ್, ನರಸಿಂಹಮೂರ್ತಿ, ದಾವುಲ್ಸಾಬ್, ಸುನಿಲ್ ಡಿ.ಎಸ್, ಹೊನ್ನಪ್ಪ ಅಗಸನಮಟ್ಟ, ಗವಿಸಿದ್ದಪ್ಪ, ಸಣ್ಣಜಡೆಪ್ಪ, ಸಣ್ಣಜಡೆಪ್ಪ, ಶರಣಬಸಪ್ಪ, ದುಂಡಯ್ಯಾ ಮತ್ತು ತಾಂತ್ರಿಕ ವಿಭಾಗದ ಚಿದಾನಂದ ಮಂಟೂರ ರವರು ಆರೋಪಿಯನ್ನು ಆರೊ ಪತ್ತೆ ಮಾಡಿ, ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.







