ಶಿವಮೊಗ್ಗ: ಜಿಲ್ಲೆಯಲ್ಲಿ ಅರಣ್ಯ ಸಂಚಾರಿ ದಳದಿಂದ ಭರ್ಜರಿ ಕಾರ್ಯಾಚರಣೆ ನಡೆಸಲಾಗಿದೆ. ಅಕ್ರಮವಾಗಿ ಚಿರತೆ ಉಗುರು, ಹಲ್ಲು ಸಾಗಿಸುತ್ತಿದ್ದ ಓರ್ವ ವ್ಯಕ್ತಿಯನ್ನು ಮಾಲು ಸಹಿತ ಬಂಧಿಸಲಾಗಿದೆ.
ಮಡಿಕೇರಿಯ ಸಿಐಡಿ ಅರಣ್ಯ ಘಟಕದ ಪೊಲೀಸ್ ವರಿಷ್ಠಾಧಿಕಾರಿ ಎಸ್ ಎಸ್ ಕಾಶಿ ಅವರಿಗೆ ಚಿರತೆ ಹಲ್ಲು, ಉಗುರು ಸಾಗಿಸುತ್ತಿದ್ದಂತ ಖಚಿತ ಮಾಹಿತಿ ದೊರೆತಿತ್ತು. ಈ ಮಾಹಿತಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಇನ್ಸ್ ಪೆಕ್ಟರ್ ವಿನಾಯಕ್ ಅವರಿಗೆ ನೀಡಿದ್ದರು. ಅವರ ಮಾರ್ಗದರ್ಶನದಲ್ಲಿ ವಿನಾಯಕ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದರು.
ಸೋಮವಾರದಂದು ಚಿರತೆ ಉಗುರು, ಹಲ್ಲು ಸಾಗಿಸುತ್ತಿದ್ದಂತ ವ್ಯಕ್ತಿಯನ್ನು ಪತ್ತೆ ಹಚ್ಚಿ ಆನಂದಪುರದ ದಾಸನಕೊಪ್ಪ ಸರ್ಕಲ್ ನ ಪೆಟ್ರೋಲ್ ಬಂಕ್ ಬಳಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಶಿಕಾರಿಪುರ ತಾಲ್ಲೂಕಿನ ಹಾರೊಗೊಪ್ಪದ ಲೋಕೇಶ್ ಎಂಬುದಾಗಿ ಗುರುತಿಸಲಾಗಿದೆ. ಆರೋಪಿಯಿಂದ 16 ಚಿರತೆಯ ಉಗುರು, 3 ಹಲ್ಲುಗಳನ್ನು ಜಪ್ತಿ ಮಾಡಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಇನ್ಸ್ ಪೆಕ್ಟರ್ ವಿನಾಯಕ.ಕೆ ಜೊತೆಗೆ ಸಿಬ್ಬಂದಿಗಳಾದಂತ ಗಣೇಶ್, ವಿಶ್ವನಾಥ್, ಆಂಜನೇಯ, ದಿನೇಶ್, ಪ್ರಮೋದ ಕುಮಾರಿ ಕೂಡ ಸಾಥ್ ನೀಡಿದ್ದಾರೆ.









