ಆರೋಪಿಯನ್ನು ಬಂಧಿಸುವ ಸಂದರ್ಭದಲ್ಲಿ ಪ್ರತಿ ದಾಳಿಯಾಗಿ ಗುಂಡು ಹಾರಿಸಿದ ಪೊಲೀಸರು. ಬೆಂಗಳೂರಿನ ಹೊರವಲಯದಲ್ಲಿ ರೌಡಿಶೀಟರ್ ಕಾಲಿಗೆ ಬೆಳ್ಳಂಬೆಳಗ್ಗೆ ಗುಂಡಿನ ದರ್ಶನವಾಗಿದೆ. ರೌಡಿಶೀಟರ್ ಸುನೀಲ ಅಲಿಯಾಸ್ ಹಾವೇರಿ ಮೇಲೆ ಗುಂಡು ಹಾರಿಸಿ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ಯಾಂಗ್ ವಾರ್ ಗೆ ಸಂಬಂಧಪಟ್ಟಂತೆ ತಿಂಗಳಿನಿಂದ ಹುಡುಕಾಟದಲ್ಲಿದ್ದ ಪೊಲೀಸರು ಇಂದು ಬೆಳಗ್ಗೆ ಗುಂಡಿನ ಪ್ರತಿ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬಂಡಾಪುರ ಬಳಿ ಆರೋಪಿ ಅವಿತಿರುವ ಮಾಹಿತಿಯ ಆಧಾರದ ಮೇಲೆ ಪೊಲೀಸರು ಬಂಧಿಸಲು ಬಂದಿದ್ದರು.
ಈ ವೇಳೆ ನಿಗದಿತ ಸ್ಥಳದಲ್ಲೇ ಅವಿತಿದ್ದ ಸುನಿಲ ,ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಆತನನ್ನು ಹಿಡಿಯಲು ಹೋದ ಕಾನ್ಸ್ಟೇಬಲ್ ವಿನಯ್ ಮೇಲೆ ಲಾಂಗ್ ನಿಂದ ಹಲ್ಲೆ ಮಾಡಿದ್ದಾನೆ. ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಹೆದರದ ಆರೋಪಿಯ ಕಾಲಿಗೆ ಗುಂಡು ಹಾರಿಸುವ ಅನಿವಾರ್ಯ ಸ್ಥಿತಿಗೆ ಪೊಲೀಸರು ತಲುಪಿದ್ದರು.
ಇನ್ನು ಸುನಿಲ, ರೌಡಿಶೀಟರ್ ಮನು ಎಂಬಾತನ ಸಹಚರನಾಗಿದ್ದ. ಗ್ಯಾಂಗ್ ವಾರ್, ಕೊಲೆ ಯತ್ನ ಪ್ರಕರಣದಲ್ಲಿ ಬೇಕಾಗಿದ್ದನು. ಈತನಿಗಾಗಿ ಆನೇಕಲ್ ಉಪ ವಿಭಾಗದ ಪೊಲೀಸರು ಹುಡುಕಾಟದಲ್ಲಿದ್ದರು. ಬಂಧಿಸುವ ಪ್ರಯತ್ನದಲ್ಲಿ ಡಿಯೋ ಬೈಕ್ ಏರಿ ಪಾರಾಗಲು ಯತ್ನಿಸಿದ್ದಾನೆ ಎಂಬ ಮಾಹಿತಿ ನಮ್ಮ ಪೊಲೀಸ್ ಮಾಧ್ಯಮಕ್ಕೆ ದೊರಕಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಬಲಗಾಲಿಗೆ ಅತ್ತಿಬೆಲೆ ಇನ್ಸ್ಪೆಕ್ಟರ್ ರಾಘವ ಗೌಡ ಗುಂಡು ಹಾರಿಸಿದ್ದಾಗಿ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಆನೇಕಲ್ ಉಪ ವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಸದ್ಯ ಆರೋಪಿಯನ್ನು ಆಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಇರಿಸಿದ್ದು, ಪೊಲೀಸರ ದಿಟ್ಟತನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.ವರದಿ : ಮೋಹನ್








