ಪೀಣ್ಯ ಪೊಲೀಸ್ ಠಾಣೆಯಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಧವಾರದಲ್ಲಿ ವಾಸವಿರುವ ಪಿರಿಯಾದುದಾರರು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರ್ಯಾದುದಾರ ಅಣ್ಣನ ಮಗನ ಮದುವೆಯು ಹಾಸನದಲ್ಲಿ ಇದ್ದುದ್ದರಿಂದ ಸಂಜೆ ಎಂಟನೇ ಮೈಲಿ ಬಸ್ ನಿಲ್ದಾಣದಿಂದ ಹಾಸನಕ್ಕೆ ಹೋಗಲು ಬಸ್ ಹತ್ತುವ ಸಮಯದಲ್ಲಿ ಕೆಲವರು ತಲ್ಲಾಡಿಕೊಂಡು ಬಸ್ ಹತ್ತಿದರು. ಬಸ್ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಪಿರ್ಯಾದುದಾರರ ಜೊತೆಯಲ್ಲಿ ತಳ್ಳಾಡಿಕೊಂಡು ಬಸ್ ಹತ್ತಿದ ಮೂವರು ಮಹಿಳೆಯರು ಸೀಟ್ ಇಲ್ಲವೆಂದು ಗೊಣಗುತ್ತಾ, ಬೇರೆ ಬಸ್ಗೆ ಹೋಗುತ್ತೇವೆ ಎಂದು ಹೇಳಿ ಬಸ್ನಿಂದ ಇಳಿದು ಹೊರಟು ಹೋಗಿರುತ್ತಾರೆ. ಬಸ್ ನೆಲಮಂಗಲದ ಅರಸಿನಕುಂಟೆ ಬಳಿ ಹೋಗುತ್ತಿದ್ದಾಗ ಪಿರಿಯಾದುದಾರರು ವ್ಯಾನಿಟಿ ಬ್ಯಾಗ್ ಅನ್ನು ಪರಿಶೀಲಿಸಲಾಗಿ, ಮದುವೆಗೆ ಹಾಕಿಕೊಳ್ಳಲು ಬ್ಯಾಗ್ ನಲ್ಲಿ ಇಟ್ಟಿದ್ದ 50 ಗ್ರಾಂ ಚಿನ್ನಾಭರಣಗಳು ಕಾಣೆಯಾಗಿದ್ದು, ಪಿರ್ಯಾದುದಾರರ ಜೊತೆಯಲ್ಲಿ ತಳ್ಳಾಡಿಕೊಂಡು ಬಸ್ ಹತ್ತಿದ ಮೂವರು ಮಹಿಳೆಯರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಪೀಣ್ಯ ಪೊಲೀಸ್ ಠಾಣೆಯಲ್ಲಿ ಚಿನ್ನಾಭರಣ ಕಳವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಕೆಯನ್ನು ಕೈಗೊಂಡು, ಬಾತ್ಮಿದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ ಠಾಣಾ ಸರಹದ್ದಿನ ತುಮಕೂರು ರಸ್ತೆ 8 ಮೈಲಿ ಬಸ್ ನಿಲ್ದಾಣದ ಬಳಿ ಮೂವರು ಬುರ್ಖಾ ದಾರಿ ಮಹಿಳೆಯರನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ಮೂವರು ಮಹಿಳೆಯರನ್ನು ವಿಚಾರಿಸಲಾಗಿ, ಈ ಪ್ರಕರಣದಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿರುತ್ತಾರೆ. ಹಾಗೂ ಇದೇ ರೀತಿಯಲ್ಲಿ ಮೂರು ಕಳವು ಪ್ರಕರಣದಲ್ಲಿ ಪೀಣ್ಯದಲ್ಲಿ ಕಳವು ಮಾಡಿರುವುದಾಗಿಯೂ ಸಹ ತಿಳಿಸಿರುತ್ತಾರೆ.
ಮೂವರು ಆರೋಪಿತೆಯರನ್ನು ಸುಧೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಕಳವು ಮಾಡಿದ ಚಿನ್ನಾಭರಣಗಳನ್ನು ಯಶವಂತಪುರದ ರೈಲ್ವೆ ಟ್ರ್ಯಾಕ್ ಬಳಿಯ ಒಂದು ಶೆಡ್ನಲ್ಲಿ ಇಟ್ಟಿರುವುದಾಗಿ ತಿಳಿಸಿರುತ್ತಾರೆ. ರೈಲ್ವೆ ಟ್ರ್ಯಾಕ್ ಬಳಿ ಇರುವ ಶೆಡ್ನಿಂದ ಚಿನ್ನಾಭರಣಗಳನ್ನು ವಶ ಪಡಿಸಿಕೊಳ್ಳಲಾಯಿತು. ಇವುಗಳ ಮೌಲ್ಯ 16,00,000/-(ಹದಿನಾರು ಲಕ್ಷ ರೂಪಾಯಿ)
ಈ ಪ್ರಕರಣದ ಮೂವರು ಆರೋಪಿತೆಯರ ಬಂಧನದಿಂದ ಪೀಣ್ಯ ಪೊಲೀಸ್ ಠಾಣೆಯ-04 ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ವಾಯುವ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ನಾಗೇಶ್ ಡಿ.ಎಲ್ ರವರ ಮಾರ್ಗದರ್ಶನದಲ್ಲಿ ಪೀಣ್ಯ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರವರಾದ ಶ್ರೀ. ಅಶೋಕ್. ಎಂ.ಎಸ್ರವರ ನೇತೃತ್ವದಲ್ಲಿ, ಪೀಣ್ಯ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್, ಶ್ರೀ ಅನಿಲ್ ಕುಮಾರ್.ಎಂ.ಎಸ್ರವರ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









