ಬೆಂಗಳೂರಿನ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಜ್ಯೂವೆಲರಿ ಅಂಗಡಿಯೊಂದರ ಹಿಂಭಾಗದ ಗೋಡೆಯನ್ನು ಹೊಡೆದು ಕಳವು ಮಾಡಿದ್ದ ಹೊರರಾಜ್ಯದ ಮೂವರು ಖತರ್ನಾಕ್ ಕಳ್ಳರನ್ನು ಬಾಗಲಗುಂಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು 98 ಲಕ್ಷದ 39 ಸಾವಿರ ರೂಪಾಯಿ ಮೌಲ್ಯದ 35 ಕೆ.ಜಿ 874 ಗ್ರಾಂ ಬೆಳ್ಳಿಯ ಗಟ್ಟಿ ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಏಪ್ರಿಲ್ 27ರ ರಾತ್ರಿ ಜ್ಯೂವೆಲರಿ ಅಂಗಡಿಯ ಮಾಲೀಕರು ಎಂದಿನಂತೆ ಅಂಗಡಿ ಮುಚ್ಚಿ ಮನೆಗೆ ತೆರಳಿದ್ದರು. ಈ ವೇಳೆ ಹೊಂಚು ಹಾಕಿದ್ದ ಕಳ್ಳರು, ಅಂಗಡಿಯ ಹಿಂಬದಿಯ ಗೋಡೆಯನ್ನು ಸೈಲಂಟಾಗಿ ಹೊಡೆದು ಒಳನುಗ್ಗಿದ್ದಾರೆ. ಅಂಗಡಿಯಲ್ಲಿದ್ದ ಬೆಳ್ಳಿಯ ಆಭರಣಗಳು ಮಾತ್ರವಲ್ಲದೆ, ಪಕ್ಕದ ಸೆರಾಮಿಕ್ಸ್ ಅಂಗಡಿಯ ಬೀಗ ಮುರಿದು ಲ್ಯಾಪ್ಟಾಪ್, ಮೊಬೈಲ್ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಭಾತ್ಮೀದಾರರ ಖಚಿತ ಮಾಹಿತಿ ಮೇರೆಗೆ ಮೇ 8 ರಂದು ರಾಜಸ್ಥಾನದ ರಾಯಪುರದಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ತದನಂತರ ಅವರಿಂದ ಬಂದ ಸುಳಿವಿನ ಆಧಾರದ ಮೇಲೆ ಮೇ 17ರಂದು ನೆಲಮಂಗಲದ ದಾಸನಪುರದಲ್ಲಿ ಮತ್ತೋರ್ವ ಸಹಚರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಚಾರಣೆ ವೇಳೆ ಕಳ್ಳರು ಕಳವು ಮಾಡಿದ ಬೆಳ್ಳಿಯನ್ನು ತೆಲಂಗಾಣದ ಕುಲ್ಯಾಚರಲಾ ಹಾಗೂ ಸಿಕಂದರಾಬಾದ್ನ ಜ್ಯೂವೆಲರಿ ಅಂಗಡಿಗಳಲ್ಲಿ ಅಡವಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಮೂವರೂ ಆರೋಪಿಗಳನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ವಾಯುವ್ಯ ವಿಭಾಗದ ಡಿಸಿಪಿ ನಾಗೇಶ್ ಡಿ.ಎಲ್. ಹಾಗೂ ಎಸಿಪಿ ರವಿಕುಮಾರ್ ಕೆ.ವೈ.ಮಾರ್ಗದರ್ಶನದಲ್ಲಿ, ಬಾಗಲಗುಂಟೆ ಇನ್ಸ್ಪೆಕ್ಟರ್ ಗಂಗರುದ್ರಯ್ಯ ಪಿ. ಮತ್ತು ತಂಡದ ಈ ಯಶಸ್ವಿ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.







