ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾಸರ ಹದ್ದಿನ, ಪ್ರಗತಿ ನಗರದಲ್ಲಿ ವಾಸವಿರುವ ಪಿರಿಯಾದುದಾರರು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ.
ದೂರಿನಲ್ಲಿ ಪಿರಿಯಾದುದಾರರು ಸಂಜೆ ಕೂಡ್ಲು ಗೇಟ್ನಲ್ಲಿರುವ ಸ್ನೇಹಿತನ ಮನೆಗೆ ಹೋಗುವ ಸಲುವಾಗಿ ಎಲೆಕ್ಟ್ರಾನಿಕ್ ಸಿಟಿ ಬಿ.ಎಂ.ಟಿ.ಸಿ ಬಸ್ ನಿಲ್ದಾಣದಿಂದ ಬಸ್ ಹತ್ತುವ ಸಮಯದಲ್ಲಿ ನಾಲ್ವರು ಹುಡುಗರು ಪಿರಿಯಾದುದಾರರನ್ನು ತಲ್ಲಾಡಿಕೊಂಡಿರುತ್ತಾರೆ
ಪಿರಿಯಾದುದಾರರು ಸ್ವಲ್ಪ ದೂರ ಪ್ರಯಾಣ ಮಾಡಿದ ನಂತರ, ಜೇಬಿನಲ್ಲಿದ್ದ ಮೊಬೈಲ್ ಕಾಣೆಯಾಗಿರುವುದೆಂದು ತಿಳಿದುಕೊಂಡು, ಬಸ್ ಹತ್ತುವ ಸಮಯದಲ್ಲಿ ಪಿರಿಯಾದುದಾರರನ್ನು ತಳ್ಳಾಟ ಮಾಡಿದ್ದ ಹುಡುಗರೇ ಮೊಬೈಲ್ ಫೋನನ್ನು ಕಳವು ಮಾಡಿರುವುದಾಗಿ ಅನುಮಾನ ವ್ಯಕ್ತಪಡಿಸಿ, ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆಯುವ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಕೆಯನ್ನು ಮುಂದುವರಿಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಕೆಯನ್ನು ಕೈಗೊಂಡು, ಬಾತ್ಮಿದಾರದಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ಮುಖ್ಯ ರಸ್ತೆಯ ಬಿ.ಎಂ.ಟಿ.ಸಿ ಬಸ್ ನಿಲ್ದಾಣದ ಬಳಿ ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಮೊಬೈಲ್ ಫೋನನ್ನು ಕಳವು ಮಾಡಿರುವುದಾಗಿ ಹಾಗೂ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿಯೂ ಮೊಬೈಲ್ ಫೋನ್ ಗಳನ್ನು ಕಳವು ಮಾಡಿರುವುದಾಗಿ ತಪ್ಪೋಪ್ಪಿ ಕೊಂಡಿರುತ್ತಾರೆ.
ಆರೋಪಿಗಳ ವಶದಲ್ಲಿದ್ದ 21 ಮೊಬೈಲ್ ಫೋನ್ ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಎರ್ಟಿಗಾ ಕಾರನ್ನು ವಶಪಡಿಸಿಕೊಂಡಿರುತ್ತಾರೆ.
ಪೊಲೀಸ್ ಅಭಿರಕ್ಷೆಗೆ ಪಡೆದ ಮೂವರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿ, ಈ ಪ್ರಕರಣದಲ್ಲಿ ಇನ್ನೂ ನಾಲ್ವರು ಸಹಚರರು ಭಾಗಿಯಾಗಿರುವುದಾಗಿ ತಿಳಿಸಿ, ಅವರುಗಳ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ.
ದೇವನಹಳ್ಳಿಯ ದೇವಗಾನಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ಮೂವರ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪು ಒಪ್ಪಿಕೊಂಡಿರುತ್ತಾರೆ. ಅವರುಗಳ ವಶದಲ್ಲಿದ್ದ 49 ಮೊಬೈಲ್ ಫೋನ್ ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಆಟೋರಿಕ್ಷಾ ವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಈ ಪ್ರಕರಣದ 6 ಆರೋಪಿಗಳ ಬಂಧನದಿಂದ ಒಟ್ಟು 70 ಮೊಬೈಲ್ ಫೋನ್ ಗಳು, 1 ಕಾರು ಮತ್ತು 1 ಆಟೋರಿಕ್ಷವನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಒಟ್ಟು ಮೌಲ್ಯ 25,00,000/-(ಇಪ್ಪತ್ತೈದು ಲಕ್ಷ ರೂಪಾಯಿ).
ಈ ಪ್ರಕರಣದ ಆರೋಪಿಗಳ ಬಂಧನದಿಂದ, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ 1 ಮೊಬೈಲ್ ಫೋನ್ ಕಳವ ಪ್ರಕರಣ ಪತ್ತೆ ಆಗಿರುತ್ತದೆ. ಉಳಿದ 69 ಮೊಬೈಲ್ ಫೋನ್, 1 ಕಾರ್, 1 ಆಟೋರಿಕ್ಷದ ಮಾಲೀಕರುಗಳು ಪತ್ತೆಯಾಗಬೇಕಾಗಿದ್ದು ಹಾಗೂ ಈ ಪ್ರಕರಣದಲ್ಲಿ ತಲೆಮರಿಸಿಕೊಂಡಿರುವ ಮತ್ತೋರ್ವ ವ್ಯಕ್ತಿಯ ಪತ್ತೆ ಕಾರ್ಯ ಸಹ ಮುಂದುವರೆದಿದೆ, ತನಿಖೆ ಪ್ರಗತಿಯಲ್ಲಿದೆ.
ಪ್ರಕರಣದ 6 ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಉಪ ಪೊಲೀಸ್ ಆಯುಕ್ತರವರಾದ ಶ್ರೀ. ಎಂ ನಾರಾಯಣ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರವರಾದ ಶ್ರೀ. ಕೆ. ಎಂ ಸತೀಶ್ರವರ ನೇತೃತ್ವದಲ್ಲಿ, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ನವೀನ್ ಜಿ. ಎಂ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









