ನಂಬಿಕಸ್ಥರೇ ದ್ರೋಹ ಬಗೆದರೆ ಏನಾಗಬಹುದು ಎಂಬುದಕ್ಕೆ ಬೆಂಗಳೂರಿನ ಜಯನಗರದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಬರೋಬ್ಬರಿ 18 ವರ್ಷಗಳಿಂದ ಮನೆಯ ಮಗಳಂತೆ ಇದ್ದು ಕೆಲಸ ಮಾಡುತ್ತಿದ್ದ ಮನೆಗೆಲಸದ ಮಹಿಳೆಯೊಬ್ಬಳು, ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ-ಬೆಳ್ಳಿ ಹಾಗೂ ನಗದನ್ನು ಕಳ್ಳತನ ಮಾಡಿ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಜಯನಗರದಲ್ಲಿ ನಡೆದಿದೆ.ಜಯನಗರ 5ನೇ ಬ್ಲಾಕ್ನ ನಿವಾಸಿಯೊಬ್ಬರು ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿರುವ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಮಾರ್ಚ್ 4 ರಂದು ಇವರು ಕಬೋರ್ಡ್ನಲ್ಲಿ ಕುಟುಂಬದ ಸಮಾರಂಭಕ್ಕಾಗಿ ಪುರೋಹಿತರಿಗೆ ನೀಡಲು 1,25,000/- ನಗದು ಹಣವನ್ನು ಇಟ್ಟಿದ್ದರು. ಆದರೆ ಮಾರನೇ ದಿನ ಅಂದರೆ ಮಾರ್ಚ್ 5 ರಂದು ಪರಿಶೀಲಿಸಿದಾಗ ಅದರಲ್ಲಿ 65,000/- ಹಣ ಮಾಯವಾಗಿತ್ತು. ಇದರಿಂದ ಅನುಮಾನಗೊಂಡು ಮನೆಯಲ್ಲಿದ್ದ ಇತರೆ ಲಾಕರ್ಗಳನ್ನು ತಪಾಸಣೆ ಮಾಡಿದಾಗ, ಮನೆಯಲ್ಲಿದ್ದ ಚಿನ್ನಾಭರಣಗಳು, ಬೆಳ್ಳಿಯ ಬಿಸ್ಕೆಟ್ಗಳು ಹಾಗೂ ಬೆಳ್ಳಿ ವಸ್ತುಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಕಳೆದ 18 ವರ್ಷಗಳಿಂದ ತಮ್ಮ ಮನೆಯಲ್ಲೇ ನಂಬಿಕಸ್ಥಳಾಗಿ ಕೆಲಸ ಮಾಡಿಕೊಂಡಿದ್ದ ಕೆಲಸದಾಕೆಯ ಮೇಲೆಯೇ ಮಾಲೀಕರಿಗೆ ತೀವ್ರ ಅನುಮಾನ ಮೂಡಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 9 ರಂದು ಜಯನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಲೀಕರು ದೂರನ್ನು ದಾಖಲಿಸಿದ್ದರು.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಯನಗರ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು. ಜೂನ್ 22 ರಂದು ಸಂಶಯಾಸ್ಪದ ಕೆಲಸದಾಕೆಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ, ಆಕೆ ತಾನೇ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.
ಕೂಡಲೇ ಪೊಲೀಸರು ಆರೋಪಿತೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ಸುದೀರ್ಘ ವಿಚಾರಣೆಯ ಬಳಿಕ, ತಾನು ಕದ್ದ ಮಾಲುಗಳನ್ನೆಲ್ಲಾ ಪೂರ್ಣ ಪ್ರಜ್ಞಾ ಲೇಔಟ್ನಲ್ಲಿರುವ ತನ್ನ ಸ್ವಂತ ಮನೆಯಲ್ಲಿ ಬಚ್ಚಿಟ್ಟಿರುವುದಾಗಿ ಆಕೆ ಬಾಯಿಬಿಟ್ಟಿದ್ದಾಳೆ.ಆರೋಪಿ ನೀಡಿದ ಮಾಹಿತಿಯ ಮೇರೆಗೆ ಜೂನ್ 23 ರಂದು ಆಕೆಯ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು ಕೋಟ್ಯಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಶಪಡಿಸಿಕೊಳ್ಳಲಾದ ವಸ್ತುಗಳ ವಿವರ ಹೀಗಿದೆ:

262 ಗ್ರಾಂ ತೂಕದ ಚಿನ್ನಾಭರಣಗಳು ,2 ಕೆಜಿ 366 ಗ್ರಾಂ ತೂಕದ ಬೆಳ್ಳಿ ಬಿಸ್ಕೆಟ್ಗಳು ಮತ್ತು ಬೆಳ್ಳಿ ವಸ್ತುಗಳು ,₹65,000/- ನಗದು ಹಣ,05 ದುಬಾರಿ ರೇಷ್ಮೆ ಸೀರೆಗಳು
ಪೊಲೀಸರು ವಶಪಡಿಸಿಕೊಂಡಿರುವ ಈ ಎಲ್ಲಾ ಮಾಲುಗಳ ಒಟ್ಟು ಮೌಲ್ಯ ಬರೋಬ್ಬರಿ ₹50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಸದ್ಯ ಕಳವು ಮಾಲನ್ನು ಜಪ್ತಿ ಮಾಡಿರುವ ಪೊಲೀಸರು, ಆರೋಪಿತೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ (DCP) ಡಾ: ಕೆ. ವಂಶಿಕೃಷ್ಣ ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ (ACP) ಶ್ರೀ ಲಕ್ಷ್ಮೀನಾರಾಯಣ ಅವರ ನೇತೃತ್ವದಲ್ಲಿ, ಜಯನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ ಗಿರೀಶ್ ಎಂ.ಎಲ್ ಹಾಗೂ ಅವರ ಸಿಬ್ಬಂದಿ ತಂಡವು ಅತ್ಯಂತ ಚಾತುರ್ಯದಿಂದ ಈ ಕಳವು ಪ್ರಕರಣವನ್ನು ಭೇದಿಸಿ, ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ಇಲಾಖೆಯ ಈ ಯಶಸ್ವಿ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.
ಮನೆಯಲ್ಲಿ ಎಷ್ಟೇ ವರ್ಷಗಳಿಂದ ಕೆಲಸಕ್ಕಿದ್ದರೂ, ಅಮೂಲ್ಯ ವಸ್ತುಗಳು ಹಾಗೂ ನಗದು ಇಡುವಾಗ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ.










