ಬೆಂಗಳೂರು ನಗರ ಪೊಲೀಸ್ ಉತ್ತರ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 94 ಆರೋಪಿಗಳನ್ನು ಬಂಧಿಸಿ, 70 ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಸುಮಾರು ₹4 ಕೋಟಿ 91 ಲಕ್ಷ 94 ಸಾವಿರ 517 ಮೌಲ್ಯದ ಕಳುವಾದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 2 ಕೆಜಿ 462 ಗ್ರಾಂ ಚಿನ್ನಾಭರಣ, 11 ಗ್ರಾಂ ವಜ್ರಾಭರಣ, 2 ಕೆಜಿ 381 ಗ್ರಾಂ ಬೆಳ್ಳಿ ವಸ್ತುಗಳು, 64 ದ್ವಿಚಕ್ರ ವಾಹನಗಳು, 4 ತ್ರಿಚಕ್ರ ವಾಹನಗಳು, 71 ಮೊಬೈಲ್ ಫೋನ್ಗಳು, ಒಂದು ಲ್ಯಾಪ್ಟಾಪ್, ಒಂದು ಟಿವಿ, ಐದು ಸಿಲಿಂಡರ್ಗಳು, 44.780 ಕೆಜಿ ಶ್ರೀಗಂಧದ ಮರ ಹಾಗೂ ₹34.34 ಲಕ್ಷ ನಗದು ಸೇರಿವೆ.
ಮಲ್ಲೇಶ್ವರಂ, ಶ್ರೀರಾಮಪುರ, ರಾಜಾಜಿನಗರ, ಸುಬ್ರಮಣ್ಯನಗರ, ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್, ಯಶವಂತಪುರ, ಆರ್.ಎಂ.ಸಿ. ಯಾರ್ಡ್, ಜಾಲಹಳ್ಳಿ, ಜೆ.ಸಿ.ನಗರ, ಆರ್.ಟಿ.ನಗರ, ಸಂಜಯನಗರ ಹಾಗೂ ಹೆಬ್ಬಾಳ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಹಾಗೂ ಇತರೆ ಅಪರಾಧ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಿಸಿರುವ ಈ ಕಾರ್ಯಾಚರಣೆ, ನಗರದಲ್ಲಿ ಅಪರಾಧ ನಿಯಂತ್ರಣ ಮತ್ತು ಕಳುವಾದ ಆಸ್ತಿಗಳ ಮರುಪಡೆಯುವಲ್ಲಿ ಪೊಲೀಸ್ ಇಲಾಖೆಯ ದಕ್ಷತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ನಾಗರಿಕರು ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.









