ಬೆಳ್ಳಂದೂರು ಪೊಲೀಸ್ ಠಾಣಾ ಸರಹದ್ದಿನ ದೊಡ್ಡಕನ್ನಹಳ್ಳಿಯ ಅಪಾರ್ಟ್ವೊಂದರಲ್ಲಿ ವಾಸವಿರುವ ಪಿರಾದುದಾರರು ದಿನಾಂಕ:23/12/2024 ರಂದು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ದಿನಾಂಕ:20/12/2024 ರಂದು ಬೆಳಿಗ್ಗೆ ಕೆಲಸದ ನಿಮಿತ್ತ ಬಿಡದಿಗೆ ಹೋಗಿರುತ್ತಾರೆ. ದಿನಾಂಕ:22/12/2024 ರಂದು ವಾಪಸ್ ಮನೆಗೆ ಬಂದು ನೋಡಿದಾಗ ಪಿರಾದುದಾರರ ಕೊಠಡಿಯ ತೆರೆದ ಕಬೋರ್ಡ್ನಲ್ಲಿಟ್ಟಿದ್ದ ವಿವಿಧ ಬಗೆಯ ಸುಮಾರು 700 ಗ್ರಾಂ ಚಿನ್ನಾಭರಣಗಳನ್ನು, ಕಳವು ಮಾಡಿರುವುದಾಗಿ ಹಾಗೂ ಮನೆಯಲ್ಲಿ ಕೆಲಸ ಮಾಡುತ್ತಿರುವ ಕೆಲಸದಾಕೆಯ ಬಗ್ಗೆ ಅನುಮಾನವಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಮನೆ ಕಳವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:06/01/2025 ರಂದು ಕಸವನಹಳ್ಳಿಯ ಶಿವನ ದೇವಸ್ಥಾನದ ಬಳಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿ, ಈ ಪ್ರಕರಣದಲ್ಲಿ ಚಿನ್ನಾಭರಣವನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ. ಹಾಗೂ ಪಿರಾದುದಾರರ ಮನೆಯಲ್ಲಿ ಈ ಹಿಂದೆ 2023ರಲ್ಲಿ ಕಾರು ಚಾಲಕನಾಗಿ ಕೆಲಸಕ್ಕೆ ಸೇರಿದ್ದು, 2024ರ ಫೆಬ್ರವರಿಯಲ್ಲಿ ಕೆಲಸವನ್ನು ಬಿಟ್ಟಿರುವುದಾಗಿ ತಿಳಿಸಿ, ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಸಮಯದಲ್ಲಿ ಮಾಲೀಕರ ಮನೆಯ ಮುಂಭಾಗಿಲಿನ ಕೀಯನ್ನು ನಕಲು ಮಾಡಿಸಿಕೊಂಡಿರುವುದಾಗಿ ತಿಳಿಸಿರುತ್ತಾನೆ.
ದಿನಾಂಕ:20/12/2024 ರಿಂದ 22/12/2024 ರ ನಡುವೆ ಪಿರಾದುದಾರರು ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿ, ನಕಲಿ ಕೀಯಿಂದ ಮನೆಯ ಬಾಗಿಲನ್ನು ತೆರೆದು, ಚಿನ್ನಾಭರಣವನ್ನು ಕಳವು ಮಾಡಿರುವುದಾಗಿ ಹಾಗೂ ಕಳವು ಮಾಡಿದ ಚಿನ್ನಾಭರಣವನ್ನು ಕಸವನಹಳ್ಳಿಯಲ್ಲಿರುವ ವಲ್ಲಿಯಮ್ಮ ಲೇಔಟ್ನ ಆತನ ವಾಸದ ಮನೆಯಲ್ಲಿ ಹಾಗೂ ಕಸವನಹಳ್ಳಿಯಲ್ಲಿರುವ ಫೈನಾನ್ಸ್ ಕಂಪನಿಯೊಂದರಲ್ಲಿ ಅಡಮಾನವಿಟ್ಟಿರುವುದಾಗಿ ತಿಳಿಸಿರುತ್ತಾನೆ.
ದಿನಾಂಕ:06/01/2025 ರಂದು ಕಸವನಹಳ್ಳಿಯಲ್ಲಿರುವ ಫೈನಾನ್ಸ್ ಕಂಪನಿಯೊಂದರಲ್ಲಿ ಅಡಮಾನವಿಟ್ಟಿದ್ದ 200 ಗ್ರಾಂ ಚಿನ್ನಾಭರಣಗಳು, ಹಾಗೂ ಆತನ ವಾಸದ ಮನೆಯಲ್ಲಿಟ್ಟಿದ್ದ ವಿವಿಧ ಬಗೆಯ 482 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಯಿತು. ಒಟ್ಟಾರೆ ಈ ಪ್ರಕರಣದ ಆರೋಪಿಯ ವಶದಿಂದ 682 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 45,00,000/-(ನಲವತ್ತೈದು ಲಕ್ಷ ರೂಪಾಯಿ).
ದಿನಾಂಕ:07/01/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು ವೈಟ್ ಫೀಲ್ಡ್ ಡಾ.ಶಿವಕುಮಾರ್ ಗುಣಾರೇ, ಐಪಿಎಸ್ ಸಹಾಯಕ ಪೊಲೀಸ್ ಆಯುಕ್ತರು, ಮಾರತ್ಹಳ್ಳಿ ಉಪ ವಿಭಾಗ ಶ್ರೀಮತಿ ಪ್ರಿಯದರ್ಶಿನಿ ಈಶ್ವರ ಸಾನೇಕೊಪ್ಪರವರ ಮಾರ್ಗದರ್ಶನದಲ್ಲಿ ಬೆಳಂದೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ.ರಮೇಶ್ ಹಾಗೂ ಅಧಿಕಾರಿ/ಸಿಬ್ಬಂದಿರವರ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









