ಕೃತ್ಯಕ್ಕೆ ಉಪಯೋಗಿಸಿದ ಕಾರು ವಶ.
ಸುಬ್ರಮಣ್ಯಪುರ ಪೊಲೀಸ್ ಠಾಣಾ ಸರಹದ್ದಿನ ಜೆ.ಪಿ ನಗರ 7ನೇ ಹಂತದ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಿರುವ ಪಿರ್ಯಾದುದಾರರು ದಿನಾಂಕ:10/05/2025 ರಂದು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರ್ಯಾದುದಾರರು ಮತ್ತು ಸ್ನೇಹಿತ ಇಬ್ಬರು ದಿನಾಂಕ:10/05/2025 ರಂದು ಬೆಳಗಿನ ಜಾವ ಜೆ.ಪಿ.ನಗರದಿಂದ ಕೋಣನಕುಂಟೆ ಕ್ರಾಸ್ ಹತ್ತಿರ ಬೈಕ್ನಲ್ಲಿ ಬಂದು, ತಳ್ಳುವ ಗಾಡಿಯಲ್ಲಿ ಟೀ ಕುಡಿಯುತ್ತಿರುವಾಗ್ಗೆ, ಅಲ್ಲಿಗೆ ಬಂದ ಒಂದು ಬಿಳಿ ಬಣ್ಣದ ಹುಂಡೈ ಕ್ರೇಟಾ ಕಾರಿನಲ್ಲಿದ್ದ ವ್ಯಕ್ತಿಯು, ಪಿರ್ಯಾದುದಾರರನ್ನು ಉದ್ದೇಶಿಸಿ ಸಿಗರೇಟ್ ನೀಡುವಂತೆ ಕೇಳಿದ್ದು, ಆಗ ಪಿರ್ಯಾದುದಾರರು ತಾನು ಟೀ ಕುಡಿಯಲು ಬಂದಿರುವುದಾಗಿ ತಿಳಿಸಿ, ಕಾರಿನಲ್ಲಿದ್ದ ವ್ಯಕ್ತಿಗೆ ಸಿಗರೇಟ್ ಬೇಕಾದರೆ ಬಂದು ತೆಗೆದುಕೋ ಎಂದು ತಿಳಿಸಿರುತ್ತಾನೆ. ಅದಕ್ಕೆ ಹುಂಡೈ ಕ್ರೇಟಾ ಕಾರಿನಲ್ಲಿದ್ದ ವ್ಯಕ್ತಿಯು, ಕಾರಿನಿಂದ ಇಳಿದು ಪಿರ್ಯಾದುದಾರರಿಗೆ ಅವಾಚ್ಯ ಶಬ್ದದಿಂದ ಬೈದು, ಹಲ್ಲೆ ಮಾಡಲು ಮುಂದಾಗಿರುತ್ತಾನೆ. ಪಿರ್ಯಾದುದಾರರು ಮತ್ತು ಸ್ನೇಹಿತನು ವಾಪಸ್ ಮನೆಗೆ ಹೋಗಲು ಕನಕಪುರ ಮುಖ್ಯರಸ್ತೆ ಕಡೆಗೆ ಬೈಕ್ನಲ್ಲಿ ಯೂಟರ್ನ್ ತೆಗೆದುಕೊಳ್ಳುತ್ತಿರುವಾಗ್ಗೆ, ಕ್ರೇಟಾ ಕಾರಿನ ಡ್ರೈವರ್ ಏಕಾಏಕಿ ಪಿರ್ಯಾದುದಾರರ ಬೈಕ್ಗೆ ಡಿಕ್ಕಿ ಹೊಡೆದು. ಕೊಲೆ ಮಾಡುವ ಉದ್ದೇಶದಿಂದ ಯತ್ನಿಸಿರುತ್ತಾನೆಂದು ತಿಳಿಸಿರುತ್ತಾರೆ. ಈ ಕುರಿತು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ಪ್ರಕರಣ ದಾಖಲಾದ ಕೇವಲ 10 ಗಂಟೆಯೊಳಗೆ ಆರ್.ಆರ್ ನಗರದಚನ್ನಸಂದ್ರದಲ್ಲಿ ಕೊಲೆ ಮಾಡಲು ಪ್ರಯತ್ನಿಸಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ ಕಾರಿನಿಂದ ಡಿಕ್ಕಿ ಮಾಡಿ. ಕೊಲೆ ಮಾಡಲು ಯತ್ನಿಸಿದ್ದಾಗಿ ತಪ್ಪೋಪ್ಪಿಕೊಂಡಿರುತ್ತಾನೆ. ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ಬಿ.ಎಸ್.ಕೆ 6ನೇ ಹಂತದ ತುರಹಳ್ಳಿ ಬಳಿಯಿರುವ ಖಾಲಿ ನಿವೇಶನದಲ್ಲಿ ನಿಲ್ಲಿಸಿರುವುದಾಗಿ ತಿಳಿಸಿರುತ್ತಾನೆ.
ದಿನಾಂಕ:11/05/2025 ರಂದು ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ಬಿಳಿ ಬಣ್ಣದ ಹುಂಡೈ ಕ್ರೇಟಾ ಕಾರನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಅದೇ ದಿನ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ ಪೊಲೀಸ್ ಕಮೀಷನರ್ ರವರಾದ ಶ್ರೀ ಲೋಕೇಶ್ ಭರಮಪ್ಪ ಜಗಲಾಸರ್ ಐ.ಪಿ.ಎಸ್ರವರ ಮಾರ್ಗದರ್ಶನದಲ್ಲಿ, ಸುಬ್ರಮಣ್ಯಪುರ ಉಪ-ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ರವರಾದ ಶ್ರೀ ಗಿರೀಶ್ ಎಸ್.ಬಿರವರ ನೇತೃತ್ವದಲ್ಲಿ, ಸುಬ್ರಮಣ್ಯಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ರಾಜು ಎಂ.ಎಸ್ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಯವರುಗಳು ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









