ಬೆಂಗಳೂರಿನ ಬನಶಂಕರಿ 2ನೇ ಹಂತದಲ್ಲಿ ನಡೆದಿದ್ದ ಬೃಹತ್ ಮನೆಗಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿ ಅಂದಾಜು 1.26 ಕೋಟಿಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
ಜನವರಿ 25ರಂದು ಉದ್ಯಮಿಯೊಬ್ಬರು ಕುಟುಂಬ ಸಮೇತ ತಮಿಳುನಾಡಿಗೆ ಹೋಗಿದ್ದಾಗ, ಮನೆ ಬೀಗ ಮುರಿದು ನುಗ್ಗಿದ್ದ ಕಳ್ಳರು ಸುಮಾರು 900 ಗ್ರಾಂ ಚಿನ್ನ ಹಾಗೂ ಪ್ಲಾಟಿನಂ ಆಭರಣಗಳನ್ನು ದೋಚಿದ್ದರು. ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಯಲಹಂಕ ರೈಲ್ವೆ ನಿಲ್ದಾಣದ ಬಳಿ ದ್ವಿಚಕ್ರ ವಾಹನದ ಸಮೇತ ಓರ್ವ ಆರೋಪಿಯನ್ನು ಹಿಡಿದ ಪೊಲೀಸರು, ಆತನ ಮೂಲಕ ಇಡೀ ಗ್ಯಾಂಗ್ ಅನ್ನು ಪತ್ತೆಹಚ್ಚಿದ್ದಾರೆ.589 ಗ್ರಾಂ ಚಿನ್ನಾಭರಣ 1 ಕೆ.ಜಿ 126 ಗ್ರಾಂ ಬೆಳ್ಳಿಯ ವಸ್ತುಗಳು. 9.50 ಲಕ್ಷ ನಗದು.ಕಳವು ಮಾಡಿದ ಹಣದಲ್ಲಿ ಖರೀದಿಸಿದ್ದ 01 ಕಾರು ಹಾಗೂ ಕೃತ್ಯಕ್ಕೆ ಬಳಸಿದ್ದ 03 ದ್ವಿಚಕ್ರ ವಾಹನಗಳು ವಶಪಡಿಸಿಕೊಂಡಿದ್ದಾರೆ ಒಟ್ಟು ಮೌಲ್ಯ: ಸುಮಾರು 1,26,63,000/– (ಒಂದು ಕೋಟಿ ಇಪ್ಪತ್ತಾರು ಲಕ್ಷದ ಅರವತ್ತ ಮೂರು ಸಾವಿರ ರೂಪಾಯಿ).
ಪೊಲೀಸರು ಆರೋಪಿಗಳನ್ನು ಹಿಂಬಾಲಿಸಿ ಕೋಣನಕುಂಟೆ ಮೆಟ್ರೋ ನಿಲ್ದಾಣ ಮತ್ತು ತಲಕಾಡಿನ ಕಲಿಯೂರು ಗ್ರಾಮಗಳಲ್ಲಿ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಬಂಧಿಸಿದ್ದಾರೆ. ಕದ್ದ ಆಭರಣಗಳನ್ನು ಖರೀದಿಸಿದ್ದ ಜ್ಯುವೆಲ್ಲರಿ ಅಂಗಡಿಯಿಂದಲೂ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ, ಲೋಕೇಶ ಭರಮಪ್ಪ ಜಗಲಾಸರ್, ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ವಿ ನಾರಾಯಣಸ್ವಾಮಿ ರವರ ಉಸ್ತುವಾರಿಯಲ್ಲಿ ಬನಶಂಕರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಕೊಟ್ರೇಶಿ ಹಾಗೂ ಶ್ರೀ ನಿಂಗನಗೌಡ ಪಾಟೀಲ್ ರವರು ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









