ಮಾರಾಟ ಮಾಡಿಕೊಡುವುದಾಗಿ ನಂಬಿಸಿ ಚಿನ್ನಾಭರಣಗಳನ್ನು ಪಡೆದು ವಂಚಿಸಿದ್ದ ಇಬ್ಬರು ವ್ಯಕ್ತಿಗಳನ್ನು ಹಲಸೂರುಗೇಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1 ಕೆಜಿ 300 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ 1.60 ಕೋಟಿ ಎಂದು ಅಂದಾಜಿಸಲಾಗಿದೆ.
ನಗರತ್ಪೇಟೆಯಲ್ಲಿ ಚಿನ್ನಾಭರಣದ ಅಂಗಡಿ ಇಟ್ಟುಕೊಂಡಿರುವ ಮಾಲೀಕರೊಬ್ಬರು ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪರಿಚಿತರಾದ ಇಬ್ಬರು ವ್ಯಕ್ತಿಗಳು ಜುಲೈ 28, 2025 ರಿಂದ ಸೆಪ್ಟೆಂಬರ್ 04, 2025 ರ ಅವಧಿಯಲ್ಲಿ ಚಿನ್ನಾಭರಣಗಳನ್ನು ಪಡೆದು ಹಣವನ್ನಾಗಲಿ ಅಥವಾ ಚಿನ್ನವನ್ನಾಗಲಿ ವಾಪಸ್ ನೀಡದೆ ಮೋಸ ಮಾಡಿದ್ದಾರೆ ಎಂದು ದೂರಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಅಕ್ಟೋಬರ್ 28, 2025 ರಂದು ಶೇಷಾದ್ರಿಪುರಂ ಬಳಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರು.

ಸುದೀರ್ಘ ವಿಚಾರಣೆ ನಂತರ, ಆರೋಪಿಗಳು ವಂಚಿಸಿದ್ದ ಚಿನ್ನಾಭರಣಗಳನ್ನು ಕರಗಿಸಿ ಗಟ್ಟಿಯನ್ನಾಗಿ ಮಾರ್ಪಡಿಸಿ ಮನೆಯಲ್ಲಿಟ್ಟಿದ್ದಾಗಿ ಒಪ್ಪಿಕೊಂಡಿದ್ದಾರೆ. ನವೆಂಬರ್ 05, 2025 ರಂದು ಅವರ ವಾಸದ ಮನೆಯಿಂದ 1 ಕೆ.ಜಿ 300 ಗ್ರಾಂ ಚಿನ್ನದ ಗಟ್ಟಿಯನ್ನು ವಶಕ್ಕೆ ಪಡೆಯಲಾಗಿದೆ.
ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಅಕ್ಷಯ್ ಎಂ ಹಾಕೆ, ಐ.ಪಿ.ಎಸ್, ಮತ್ತು ಎಸಿಪಿ ಶ್ರೀ ಶಿವಾನಂದ ಛಲವಾದಿ, ಶ್ರೀ ಎಸ್ ಸುಧೀರ್ ಅವರ ಮಾರ್ಗದರ್ಶನದಲ್ಲಿ, ಹಲಸೂರುಗೇಟ್ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಅಶ್ವಥನಾರಾಯಣಸ್ವಾಮಿ ಬಿ.ಎನ್ ಮತ್ತು ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆ ನಡೆಸುವಲ್ಲಿ ಯಶಸ್ವಿಯಾಗಿದೆ.
ಪ್ರಸ್ತುತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.










