ರಾಜಧಾನಿಯ ರಾಮಮೂರ್ತಿನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಂತರರಾಜ್ಯ ಕನ್ನಗಳ್ಳನೊಬ್ಬನನ್ನು ಬಂಧಿಸಿ ಆತನಿಂದ ಸುಮಾರು 79 ಲಕ್ಷ ರೂಪಾಯಿ ಮೌಲ್ಯದ 527 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಕಳೆದ ಅಕ್ಟೋಬರ್ 2024ರಲ್ಲಿ ಹೊಯ್ಸಳ ನಗರದ ನಿವಾಸಿಯೊಬ್ಬರು ತಮಿಳುನಾಡಿಗೆ ತೆರಳಿದ್ದ ಸಂದರ್ಭದಲ್ಲಿ, ಅವರ ಮನೆಯ ಬೀಗ ಮುರಿದು ಕಳ್ಳರು ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ದೋಚಿದ್ದರು. ಈ ಕುರಿತು ರಾಮಮೂರ್ತಿನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಬೇರೊಂದು ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರೋಪಿಯನ್ನು ಪೊಲೀಸರು ಮಾನ್ಯ ನ್ಯಾಯಾಲಯದ ಅನುಮತಿಯೊಂದಿಗೆ ಮಾರ್ಚ್ 3ರಂದು ವಶಕ್ಕೆ ಪಡೆದಿದ್ದರು.ಸತತ ವಿಚಾರಣೆಯ ವೇಳೆ ಆರೋಪಿ ತಾನು ಕಳವು ಮಾಡಿದ್ದ ಚಿನ್ನವನ್ನು ಗೋವಾದ ಎರಡು ಜ್ಯುವೆಲ್ಲರಿ ಅಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.ಆರೋಪಿ ನೀಡಿದ ಸುಳಿವಿನ ಮೇರೆಗೆ ಪೊಲೀಸರು ಗೋವಾಕ್ಕೆ ತೆರಳಿ, 79 ಲಕ್ಷ ರೂಪಾಯಿ ಮೌಲ್ಯದ 527 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಒಬ್ಬ ಆರೋಪಿಯ ಬಂಧನದಿಂದ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಒಟ್ಟು 6 ಕನ್ನ ಕಳವು ಪ್ರಕರಣಗಳನ್ನು ಬೇಧಿಸಿದಂತಾಗಿದೆ.
ಈ ಕಾರ್ಯಾಚರಣೆಯನ್ನು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಡಾ.ವಿಕ್ರಮ ಅಮಟೆ, ಐಪಿಎಸ್ರವರ ಮಾರ್ಗದರ್ಶನದಲ್ಲಿ, ಬಾಣಸವಾಡಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಉಮಾಶಂಕರ್.ಎಂ.ಹೆಚ್ರವರ ನೇತೃತ್ವದಲ್ಲಿ, ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಸತೀಶ್.ಜಿ.ಜೆ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಯವರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ









