ಹಳೇ ವೈಷಮ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಭೀಕರ ಕೊಲೆಗೆ ಸಂಚು ರೂಪಿಸಿದ್ದ ಇಬ್ಬರು ಕುಖ್ಯಾತ ರೌಡಿಶೀಟರ್ಗಳು ಸೇರಿದಂತೆ ಒಟ್ಟು ಏಳು ಜನ ಆರೋಪಿಗಳನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 30 ಮಾರಕಾಸ್ತ್ರಗಳು, ಒಂದು ಕಾರು ಹಾಗೂ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ವರ್ಷದ ಫೆಬ್ರವರಿಯಲ್ಲಿ ಅಶೋಕನಗರ ಪೊಲೀಸ್ ಠಾಣೆಯ ರೌಡಿಶೀಟರ್ ಒಬ್ಬನ ಕೊಲೆಯಾಗಿತ್ತು. ತನ್ನ ಏರಿಯಾದಲ್ಲಿ ಪ್ರಾಬಲ್ಯ ಸಾಧಿಸುವುದಕ್ಕಾಗಿ ಎದುರಾಳಿ ಗ್ಯಾಂಗ್ನ ವ್ಯಕ್ತಿಯೊಬ್ಬ ಹಣಕಾಸಿನ ನೆರವು ನೀಡಿ ಈ ಕೊಲೆ ಮಾಡಿಸಿದ್ದನು. ಈಗ ತನ್ನ ಅಣ್ಣನ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಮೃತ ರೌಡಿಶೀಟರ್ನ ಸಹೋದರ ಮತ್ತು ಆತನ ಗ್ಯಾಂಗ್ ಹೊಂಚು ಹಾಕುತ್ತಿತ್ತು.
ಜೂನ್ 26 ರಂದು ಎದುರಾಳಿಯನ್ನು ಮುಗಿಸಲು ಆರೋಪಿಗಳು ಕಾರು ಮತ್ತು ಬೈಕ್ಗಳಲ್ಲಿ ಲಾಂಗ್, ಮಚ್ಚು, ಡ್ರಾಗರ್ಗಳಂತಹ ಭೀಕರ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಸಂಘಟಿತ ಅಪರಾಧ ದಳದ (ಪಶ್ಚಿಮ ವಿಭಾಗ) ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಕೊಲೆ ಪ್ಲಾನ್ ಅನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರಲ್ಲಿ ಇಬ್ಬರು ಸಕ್ರಿಯ ರೌಡಿಶೀಟರ್ಗಳಾಗಿದ್ದಾರೆ .30 ಲಾಂಗ್, ಮಚ್ಚು ಮತ್ತು ಡ್ರಾಗರ್ಗಳು.ಕೃತ್ಯಕ್ಕೆ ಬಳಸಲು ತಂದಿದ್ದ 1 ಕಾರ್ ಹಾಗೂ 1 ಬೈಕ್ ವಶಪಡಿಸಿಕೊಳ್ಳಲಾಗಿದೆ.
ಸದ್ಯ ಈ ಭೀಕರ ಕೊಲೆ ಸಂಚಿನ ಕುರಿತು ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕಿನಿಂದ ಸಾಗಿದೆ. ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗಾಗಿ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ. ಸಮಯಪ್ರಜ್ಞೆ ಮೆರೆದು ಭೀಕರ ರಕ್ತಪಾತವನ್ನು ತಪ್ಪಿಸಿದ ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.









