ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಒಂದು ಸ್ಟೋರ್ನ ಮ್ಯಾನೇಜರ್ ನೀಡಿದ ದೂರಿನನ್ವಯ ತನಿಖೆಗಿಳಿದ ಪೊಲೀಸರು ವಾಹನಗಳು ಹಾಗೂ ವಾಹನಗಳ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೇಗೂರು – ಕೊಪ್ಪ ರಸ್ತೆಯ ಬಳಿಯಿರುವ ನೈಸ್ ರೋಡ್ ಬಳಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದರು. ಮತ್ತಿಬ್ಬರು ಸಹಚರರನ್ನು ಬನ್ನೇರುಘಟ್ಟದ ಶ್ಯಾನಭೋಗನಹಳ್ಳಿಯಲ್ಲಿರುವ ಅವರ ಮನೆಯಿಂದ ವಶಕ್ಕೆ ಪಡೆಯಲಾಯಿತು. ವಿಚಾರಣೆ ನಡೆಸಿದಾಗ, ಅವರು ಸಹ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ.
ಒಟ್ಟಾರೆಯಾಗಿ ಬಂಧಿತರಿಂದ ಒಂದು ಕಾರು, ಒಂದು ಟೆಂಪೋ ಟ್ರಾವೆಲರ್ ಮತ್ತು 24 ವಿವಿಧ ಕಂಪನಿಯ ವಾಹನಗಳ ಬ್ಯಾಟರಿಗಳನ್ನು ಸಿಟಿ ಮಾರ್ಕೆಟ್ ಮತ್ತು ಜಿಗಣಿಯ ಗುಜರಿಗಳಿಂದ ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಒಟ್ಟು ಮೌಲ್ಯ ₹11.50 ಲಕ್ಷ ಎಂದು ಅಂದಾಜಿಸಲಾಗಿದೆ.
ಈ ಪ್ರಕರಣದ ಆರೋಪಿಗಳ ಬಂಧನದಿಂದ ಒಟ್ಟು 8 ಪ್ರಕರಣಗಳು ಪತ್ತೆಯಾಗಿವೆ. ಅವುಗಳಲ್ಲಿ ಬೇಗೂರು ಪೊಲೀಸ್ ಠಾಣೆಯ 2 ಬ್ಯಾಟರಿ ಕಳವು ಪ್ರಕರಣಗಳು, ಹುಳಿಮಾವು ಪೊಲೀಸ್ ಠಾಣೆಯ 3 ಬ್ಯಾಟರಿ ಕಳವು ಪ್ರಕರಣಗಳು, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯ 1 ಬ್ಯಾಟರಿ ಕಳವು ಪ್ರಕರಣ, ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ನಗರ ಕರವೀರ ಪೊಲೀಸ್ ಠಾಣೆಯ 1 ವಾಹನ ಕಳವು ಪ್ರಕರಣ, ಮತ್ತು ತಮಿಳುನಾಡು ರಾಜ್ಯದ ಮತ್ತಿಕೇರೆ ಪೊಲೀಸ್ ಠಾಣೆಯ 1 ವಾಹನ ಕಳವು ಪ್ರಕರಣ ಸೇರಿವೆ.
ಈ ಯಶಸ್ವಿ ಕಾರ್ಯಾಚರಣೆಯು ಆಗ್ನೆಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ ಸಾರಾ ಫಾತಿಮಾ ಐ.ಪಿ.ಎಸ್. ಅವರ ಮಾರ್ಗದರ್ಶನದಲ್ಲಿ, ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಉಪ ಪೊಲೀಸ್ ಆಯುಕ್ತರಾದ ಶ್ರೀ ಕೆ.ಎಮ್. ಸತೀಶ ರವರ ನೇತೃತ್ವದಲ್ಲಿ, ಬೇಗೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಕೃಷ್ಣಕುಮಾರ್ ಪಿ.ಎಸ್. ಹಾಗೂ ಅವರ ತಂಡದ ಅವಿರತ ಪ್ರಯತ್ನದಿಂದ ಸಾಧ್ಯವಾಗಿದೆ.ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್









