ಮಾಂಸದ ಅಂಗಡಿಯೊಂದರಲ್ಲಿ ಮಚ್ಚಿನಿಂದ ತಲೆಗೆ ಹೊಡೆದು ವ್ಯಕ್ತಿಯನ್ನು ಹತ್ಯೆಗೈದಿರುವ ಘಟನೆ ಬೆಂಗಳೂರಿನ ಬೇಗೂರಿನಲ್ಲಿ ನಡೆದಿದೆ.
ಅಫ್ಸರ್ (45)ಅಂಗಡಿ ಮಾಲೀಕನಿಂದ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಅಫ್ಸರ್ ಬೆಂಗಳೂರಿನ ಶಿವಾಜಿನಗರ ನಿವಾಸಿಯಾಗಿದ್ದ. ಕಳೆದ 8 ತಿಂಗಳ ಹಿಂದೆ ಅಕ್ಬರ್ ಹಾಗೂ ಅಫ್ಸರ್ ಅಂಗಡಿ ಶುರು ಮಾಡಿದ್ದರು. ಆದರೆ ಅಂಗಡಿಯಲ್ಲಿ ವ್ಯಾಪಾರ ಸರಿಯಾಗಿ ಆಗುತ್ತಿರಲಿಲ್ಲ. ಇದರಿಂದ ಪ್ರತ್ಯೇಕ ಅಂಗಡಿ ತೆರೆಯಲು ಅಕ್ಬರ್ ನಿರ್ಧರಿಸಿದ್ದ. ಬಂಡವಾಳದ ಹಣ ವಾಪಸ್ ನೀಡುವಂತೆ ಅಫ್ಸರ್ ನನ್ನು ಕೇಳಿದ್ದ. ಅಫ್ಸರ್ ಸುಮಾರು 3 ಲಕ್ಷ ಹಣ ವಾಪಸ್ ನೀಡಿದ್ದ. ಆದರೆ ಬಾಕಿ 20,000ಹಣ ಕೊಡುವಂತೆ ಅಕ್ಬರ್ ಒತ್ತಾಯಿಸಿದ್ದ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ.
ಗಲಾಟೆ ವೇಳೆ ಇಬ್ಬರ ನಡುವೆ ತಳ್ಳಾಟ, ನೂಕಾಟ ನಡೆದಿದೆ. ಈ ವೇಳೆ ಅಕ್ಬರ್ ಅಂಗಡಿಯಲ್ಲಿದ್ದ ಮಚ್ಚಿನಿಂದಲೇ ಅಫ್ಸರ್ ತಲೆಗೆ ಹೊಡೆದಿದ್ದ. ಇದರಿಂದ ತೀವ್ರ ರಕ್ತಸ್ರಾವವಾಗಿ ಅಫ್ಸರ್ ಅಂಗಡಿಯಲ್ಲೇ ಪ್ರಾಣಬಿಟ್ಟಿದ್ದಾನೆ. ಸ್ಥಳಕ್ಕೆ ಬೇಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆರೋಪಿ ಅಕ್ಬರ್ನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.

ವರದಿ : ಆಂಟೋನಿ ಬೇಗೂರು









