ತಪ್ಪನ್ನು ಕ್ಷಮಿಸಬಹುದು.ಆದರೆ ಪದೇ ಪದೇ ಅದೇ ತಪ್ಪುಗಳನ್ನು ಅಭ್ಯಾಸ ಮಾಡಿಕೊಂಡರೆ ಅದು ತಪ್ಪಾಗುವುದಿಲ್ಲ, ಬದಲಾಗಿ ಅಪರಾಧವಾಗುತ್ತದೆ. ಈ ಪ್ರಕರಣದ ಆರೋಪಿಯೂ ಹೀಗೆ.. ನಗರದ ವಿವಿದೆಡೆ ಕಳವು ಪ್ರಕರಣಗಳಲ್ಲಿ ತಪ್ಪಿತಸ್ಥನಾಗಿದ್ದರೂ ಸಹ ಯಾರಿಗೂ ಕೇರ್ ಮಾಡದೆಯೆ ತನ್ನ ಅಕ್ರಮ ಚಟುವಟಿಕೆಯನ್ನು ನಡೆಸುತಲ್ಲಿದ್ದ. ಇದಕ್ಕೆ ಸರಿಯಾಗಿ ಒಮ್ಮೆ ಪೊಲೀಸರ ಅತಿಥಿಯಾಗುತ್ತ ಇರುವಂತೆಯೇ ಹಿಂದಿನ ಕೃತ್ಯಕ್ಕೆಲ್ಲ ಬೆಲೆ ಕಟ್ಟುವ ಸ್ಥಿತಿಗೆ ಬಂದಿದ್ದಾನೆ.
ಅಂದ ಹಾಗೆ, ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ದೇವರಚಿಕ್ಕಹಳ್ಳಿಯ ನ್ಯಾನಪ್ಪನಹಳ್ಳಿಯಲ್ಲಿ ಮನೆಯೊಂದರ ಮುಂದೆ ದ್ವಿಚಕ್ರವನ್ನು ಪಾರ್ಕ್ ಮಾಡಲಾಗಿತ್ತು. ಬೆಳಗ್ಗೆಯಾಗುವಷ್ಟರಲ್ಲಿ ಆ ವಾಹನ ಕಣ್ಮರೆಯಾಗಿರುವುದರ ಕುರಿತು ಪಿರ್ಯಾದುದಾರರು ದೂರನ್ನು ಸಲ್ಲಿಸಿದ್ದರು. ವಿವಿಧ ಮಾರ್ಗಗಳಿಂದ ಖಚಿತ ಮಾಹಿತಿಯನ್ನು ಪಡೆದ ಪೊಲೀಸರ ದಾಳಿಗೆ ಕಳ್ಳನು ಬಲಿಯಾಗಿದ್ದಾನೆ. ಬೇಗೂರಿನ ಕೋಡಿಚಿಕ್ಕನಹಳ್ಳಿ ಮುಖ್ಯ ರಸ್ತೆಯ ಡಿ ಮಾರ್ಟ್ ಬಳಿ ಕಳುವಾಗಿದ್ದ ವಾಹನದ ಸಮೇತ ಆರೋಪಿಯು ಬಲೆಗೆ ಬಿದ್ದಿದ್ದಾನೆ.
ಪೊಲೀಸ್ ಕಸ್ಟಡಿಯಲ್ಲಿ ಇರುವಾಗ, ಆರೋಪಿಯು ಮಾಡಿದ್ದ ಅನೇಕ ಅಪರಾಧಗಳಲ್ಲಿ ತಪ್ಪು ಒಪ್ಪಿಕೊಂಡಿದ್ದಾನೆ. ಬೇಗೂರು ಮತ್ತು ಕೆ.ಆರ್ ಪುರಂ ಗಳ ಮನೆಗಳಲ್ಲಿ ಚಿನ್ನಾಭರಣಗಳನ್ನು ಕಳುವು ಮಾಡಿ ಕೆಂಗೇರಿ, ಬಸವನಗುಡಿ ಮತ್ತು ಮಲ್ಲೇಶ್ವರಂ ಗೋಲ್ಡ್ ಕಂಪನಿಗಳಲ್ಲಿ ಕ್ರಮವಾಗಿ 100ಗ್ರಾಂ, 34ಗ್ರಾಂ ಮತ್ತು 30ಗ್ರಾಂ ಆಭರಣಗಳನ್ನು ಮಾರಾಟ ಮಾಡಿದ್ದನು.
ಮಾರಾಟ ಮಾಡಿದ ಎಲ್ಲಾ ಆಭರಣ ಮತ್ತು ಮನೆಯಲ್ಲಿಟ್ಟಿದ್ದ 15 ಗ್ರಾಂ ಚಿನ್ನದ ಸಹಿತ ಒಟ್ಟಾರೆ 107ಗ್ರಾಂ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಕಳುವಾಗಿದ್ದ ದ್ವಿಚಕ್ರ ವಾಹನವೂ ಪೊಲೀಸರ ವಶಕ್ಕೆ ಸಿಕ್ಕಿದ್ದು, ಇವುಗಳ ಒಟ್ಟು ಮೌಲ್ಯ 14,26,000ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಯ ಬಂಧನದಿಂದ ಬೇಗೂರು ಠಾಣೆಯ ಒಂದು ದ್ವಿಚಕ್ರ ವಾಹನ, ಒಂದು ಮನೆ ಮತ್ತು ಒಂದು ಹಗಲುಗನ್ನ ಪ್ರಕರಣಗಳು ಪತ್ತೆಯಾಗಿವೆ. ಇದರೊಟ್ಟಿಗೆ ಕೆ.ಆರ್ ಪುರಂನ ಒಂದು ಮನೆಯ ಕಳವು ಪ್ರಕರಣಕ್ಕೂ ಈತನೇ ಆರೋಪಿಯಾಗಿದ್ದಾನೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರವರಾದ ಶ್ರೀಮತಿ.ಸಾರಾ ಫಾತೀಮಾ ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಸಹಾಯಕ ಉಪ ಪೊಲೀಸ್ ಆಯುಕ್ತರವರಾದ ಶ್ರೀ. ಕೆ.ಎಂ ಸತೀಶರವರ ನೇತೃತ್ವದಲ್ಲಿ, ಬೇಗೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಕೃಷ್ಣಕುಮಾರ್ ಪಿ.ಎಸ್ ಅವರ ಅಧಿಕಾರಿಗಳ ತಂಡ ನಡೆಸಿದ್ದು, ಸಾರ್ವಜನಿಕವಾಗಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್









