ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಂಚನೆ, ಮೋಸಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನ ಮೂಲಕ ವಂಚಿಸಿ 37.50ಲಕ್ಷ ಹಣ ಪಡೆದಿರುವಂತಹ ಭೀಕರ ಅಪರಾಧವೊಂದು ತೆರೆಗೆ ಬಂದಿದೆ.
ಬೆಂಗಳೂರಿನ ಶೇಷಾದ್ರಿಪುರಂನ ಖಾಸಗಿ ಸಂಸ್ಥೆಯ ಮಾಲೀಕನೊಬ್ಬನಿಗೆ ಆರ್.ಬಿ.ಐ ನಕಲಿ ಫೈಲ್ಗಳನ್ನು ತೋರಿಸಿ ವಂಚಿಸಿದ್ದಾರೆ. ಖಾಸಗಿ ಸಂಸ್ಥೆಯು ನಷ್ಟದಲ್ಲಿದ್ದ ಸಂದರ್ಭದಲ್ಲಿ ಹಣಕಾಸಿನ ನೆರವಿಗಾಗಿ ಪರಿಚಿತರಿಬ್ಬರ ಬಳಿ ಸಹಾಯ ಕೇಳಿದ್ದು ಆ ಇಬ್ಬರು ಇನ್ನಿಬ್ಬರನ್ನು ಭೇಟಿ ಮಾಡಿಸಿದ್ದರು. ಪರಿಚಿತರಾದ ಅವರು ಆಂಟಿಕ್ ಕಾಪಲ್ ಬೌಲ್ ವಸ್ತುಗಳನ್ನು ವಿದೇಶಿ ಕಂಪನಿಗೆ ಮಾರಿದ್ದು, 15 ಲಕ್ಷ ಕೋಟಿ ರೂಪಾಯಿ ಬರಬೇಕಿದೆ. ಇದಕ್ಕೆ ಆರ್ಬಿಐ ಫೈಲ್ ಅನುಸಾರ ತೆರಿಗೆ ಕಟ್ಟಿ ಬಿಡಿಸಲು ದೆಹಲಿಗೆ ಬಂದು ಸಹಕರಿಸುವಂತೆ ನಂಬಿಸಿ, ಹಂತ - ಹಂತವಾಗಿ 37.50 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ.
ವಂಚನೆಗೊಳಗಾದ ವ್ಯಕ್ತಿ ಸಿಸಿಬಿಯ ಸಂಘಟಿತ ಅಪರಾಧ ದಳ (ಪೂರ್ವ)ದಲ್ಲಿ ನೀಡಿದ ದೂರಿನ ಅನುಸಾರ ತನಿಖೆ ನಡೆಸಿದಾಗ ವಂಚನೆ ಮಾಡಿರುವುದು ಖಾತ್ರಿಯಾಗಿದೆ. ಇದರಂತೆ ಬಸವೇಶ್ವರನಗರ ಮತ್ತು ಹುಬ್ಬಳ್ಳಿಯಿಂದ ತಲಾ ಒಬ್ಬರನ್ನು ವಶಕ್ಕೆ ಪಡೆದು ಪ್ರಕರಣದಲ್ಲಿ ವಂಚನೆಗೆ ಬಳಸಿದ್ದ ನಕಲಿ ಆರ್ಬಿಐ ಫೈಲ್ಗಳನ್ನು ವಶಕ್ಕೆ ಪಡೆದಿದ್ದಾರೆ.
ನಕಲಿ ಫೈಲ್ ನ ತಯಾರಕನೂ ಸೇರಿ ಒಟ್ಟಾರೆ ಐವರನ್ನು ವಶಕ್ಕೆ ಪಡೆದಿದ್ದು, ಎರಡು ಕಾರು, ಐದು ಮೊಬೈಲ್ ಫೋನ್, ಎರಡು ನಕಲಿ ಆರ್ಬಿಐ ಫೈಲ್ ಮತ್ತು ಒಂದು ಲಕ್ಷ ನಗದನ್ನು ಕಬ್ಜೆಗೆ ಪಡೆದುಕೊಳ್ಳಲಾಗಿದೆ.
ಬೆಂಗಳೂರು ನಗರ ಅಪರ ಪೊಲೀಸ್ ಆಯುಕ್ತರು - ಅಪರಾಧ, ಇವರ ಮಾರ್ಗದರ್ಶನದಂತೆ ಉಪ ಪೊಲೀಸ್ ಆಯುಕ್ತರು- ಅಪರಾಧ, ಇವರ ನೇತೃತ್ವದಲ್ಲಿ ಸಿಸಿಬಿ ಘಟಕದ ಸಂಘಟಿತ ಅಪರಾಧಗಳ ಪೂರ್ವ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ತನಿಖೆಯನ್ನು ಕೈಗೊಂಡಿರುತ್ತಾರೆ.ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್









