ವಿದೇಶದಲ್ಲಿ ಕೆಲಸ ಮಾಡಬೇಕು, ಅಲ್ಲಿನ ವಿಲಾಸಿ ಜೀವನವನ್ನು ಅನುಭವಿಸಬೇಕು ಎಂಬುದು ಅದೆಷ್ಟೋ ಜನರ ಪರಮಾಸೆ. ಮಧ್ಯಮ ವರ್ಗದ ಜನರಿಗಂತು ವಿಮಾನ ಏರಿ ಸಮುದ್ರ ದಾಟುವ ಇಂಗಿತ ಕಾಡುವುದಂತೂ ಸುಳ್ಳಲ್ಲ. ಆದರೆ ಇಂತಹುದೇ ಬಯಕೆಗಳನ್ನು ಬಳಸಿಕೊಂಡು, ಕೋಟ್ಯಾಂತರ ರೂಪಾಯಿ ವಂಚಿಸಿದ ಬೆಂಗಳೂರಿನ ದಂಪತಿಯೊಂದು ಕಂಬಿ ಏಣಿಸಲು ತಯಾರಾಗಿದೆ.
ಜನವರಿಗೆ 24ನೇ ದಿನದಂದು ಬೆಂಗಳೂರಿನ ಆಗ್ನೇಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದಾವೆವೊಂದು ದಾಖಲಾಗಿತ್ತು. ಪ್ರಕರಣದ ಬೆನ್ನು ಬಿದ್ದ ಪೊಲೀಸರು ಕೋಟ್ಯಂತರ ಹಣಕ್ಕೆ ಸಂಬಂಧಿಸಿದ ದೋಖಾ ದಂಪತಿಯನ್ನು ತಿಲಕ್ ನಗರದ ವಾಸಿತ ಮನೆಯಿಂದ ಬಂಧಿಸಿದ್ದಾರೆ. ಬಂಧಿತರಿಂದ ಒಂದು XUV ಕಾರು, ಒಂದು HONDA CITY ಕಾರು, ಒಂದು JAWA ಬೈಕ್, ಒಂದು YAMAHA FZ ಬೈಕ್, 24 ಗ್ರಾಂ ಚಿನ್ನಾಭರಣ ಮತ್ತು 66 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ. ಇವೆಲ್ಲವುದರ ಒಟ್ಟು ಮೌಲ್ಯ ಸುಮಾರು 80 ಲಕ್ಷ ಎಂದು ಅಂದಾಜು ಮಾಡಲಾಗಿದೆ. ಇವುಗಳನ್ನು ಹೊರತುಪಡಿಸಿ ವಂಚಿಸಿದ ಹಣದಲ್ಲಿ ಶ್ರೀಲಂಕಾ, ದುಬೈ, ಗೋವಾ, ಊಟಿ ಇನ್ನಿತರ ಸ್ಥಳಗಳಲ್ಲಿ ವಿಲಾಸಿ ಜೀವನಕ್ಕೆ ಅನುಕೂಲ ಮಾಡಿರುವ ಬಗ್ಗೆ ಬಾಯಿಬಿಟ್ಟಿದ್ದಾರೆ.
ಈ ದೋಖಾ ದಂಪತಿಯು ವಿದೇಶಗಳಿಗೆ ವೀಸಾ ಮಾಡಿಸಿ ಕೊಡುವುದಾಗಿ, ಫೇಸ್ಬುಕ್ನಲ್ಲಿ ಜಾಹೀರಾತನ್ನು ಹಾಕಿದ್ದರು. ಇದಕ್ಕೆ ಸರಿಯಾಗಿ ವಂಚಿತ ವ್ಯಕ್ತಿ ಮತ್ತು ಸ್ನೇಹಿತನಿಗೆ ತಲಾ 8 ಲಕ್ಷದಂತೆ ವೀಸಾ ಮಾಡಿಸಿ ಕೊಟ್ಟಿದ್ದರು. ಇದೇ ನಂಬಿಕೆಯಿಂದ ಮೋಸ ಹೋದವರು ಮೊದಲು 3 ವೀಸಾಗೆ 24 ಲಕ್ಷ ನೀಡಿದ್ದು, ತಡವಾಗಿ ಆಗುತ್ತೆ ಎಂದು ತಿಳಿದಿದ್ದರು. ಅದಾದರೂ ಸಹ ಇಬ್ಬರು ಪರಿಚಯಸ್ಥರಿಂದ 33 ಮತ್ತು 15 ಜನರಿಂದ ಕ್ರಮವಾಗಿ 1,78,50,000ರೂ. ಮತ್ತು 86 ಲಕ್ಷ ಕೊಡಿಸಿದ್ದರು.ಒಟ್ಟಾರೆಯಾಗಿ ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಿಗೆ 2,64,20,000ರೂ. ಗಳನ್ನು ವರ್ಗಾವಣೆ ಮಾಡಿದ್ದರು.
ವೀಸಾ ಬಾರದ ಹಿನ್ನೆಲೆಯಲ್ಲಿ ಕೇಳಿದಾಗ ನಕಲಿ ದಾಖಲೆಗಳನ್ನು ನೀಡಿದ್ದು, ಮೋಸ ಹೋಗಿರುವುದಾಗಿ ತಿಳಿದ ಮೇಲೆ ದೂರು ನೀಡಲಾಗಿತ್ತು. ಪೊಲೀಸರು ಕಷ್ಟಡಿಗೆ ಪಡೆದಾಗ, ದಂಪತಿಗಳು ಅಸಲಿ ಕಥೆಗೆ ತೆರೆಯನ್ನು ನೀಡಿದ್ದಾರೆ. ಆರೋಪಿತೆ ಬೆಂಗಳೂರಿನ ರೇಸ್ ಕೋರ್ಸ್ ನಲ್ಲಿ ಹಾರ್ಸ್ ರೈಡಿಂಗ್ ಕಲಿಯುತ್ತಿದ್ದಾಗ ವಿದೇಶಿ ಹಾರ್ಸ್ ಜಾಕಿಯೊಬ್ಬ ಪರಿಚಯನಾಗಿದ್ದ. ವೀಸಾಗಳನ್ನು ಮಾಡಿಸಿ ಕೊಡುವುದಾಗಿ ಮತ್ತು ಪ್ರತಿ ವೀಸಾಗೆ ತಲಾ 50,000ರೂ. ಕಮಿಷನ್ ನೀಡುವುದಾಗಿ ತಿಳಿಸಿದ್ದನು. ಇದರಂತೆ ಮೊದಲ ಇಬ್ಬರಿಗೆ ವೀಸಾ ಸಿಕ್ಕಿದ್ದಂತೂ ಸತ್ಯ. ನಂತರ ಹಣದ ಕಂತೆಯನ್ನು ನೋಡಿದ ದಂಪತಿಗಳು ಹೆಚ್ಚಾಗಿ ಗಳಿಕೆ ಮಾಡುವ ಉದ್ದೇಶದಿಂದ, ಪಡೆದ ದುಡ್ಡನ್ನು ಸ್ವಂತಕ್ಕೆ ಬಳಸಿಕೊಂಡು ಬರೋಬ್ಬರಿ 51 ಜನರಿಗೆ ಮನಿಮೋಸ ಮಾಡಿದ್ದಾರೆ.
ಈ ಕಾರ್ಯಾಚರಣೆಯನ್ನು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ.ಸಾರ ಫಾತೀಮಾ ಅವರ ಮಾರ್ಗದರ್ಶನದಲ್ಲಿ, ಆಗ್ನೇಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಗೋವರ್ಧನ್ ಗೋಪಾಲ್ ಅವರ ನೇತೃತ್ವದಲ್ಲಿ ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಮತಿ.ಈಶ್ವರಿ ಪಿ.ಎನ್ ,ಸಬ್ ಇನ್ಸ್ಪೆಕ್ಟರ್ ಶ್ರೀ ಪ್ರವೀಣ್ ಮತ್ತವರ ತಂಡ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್









