ನಂದಿನಿಲೇಔಟ್ ಪೊಲೀಸ್ ಠಾಣಾ ಸರಹದ್ದಿನ, ಶಂಕರ್ ನಗರದಲ್ಲಿ ವಾಸವಾಗಿರುವ ಪಿರಾದುದಾರರು ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ.
ದೂರಿನಲ್ಲಿ ಪಿರಾದುದಾರರು ಸಂಜೆ 7 ಗಂಟೆಯ ಸಮಯದಲ್ಲಿ ಶಂಕರನಗರದ ಗಣೇಶ ದೇವಸ್ಥಾನದಲ್ಲಿ ಭಜನೆಯ ಕಾರ್ಯಕ್ರಮದಲ್ಲಿರಬೇಕಾದರೆ, ಕಿಟಕಿಯ ಮೂಲಕ ಪಿರಾದುದಾರರ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಯಾರೋ ಅಪರಿಚಿತ ವ್ಯಕ್ತಿಯು ಕಿತ್ತುಕೊಳ್ಳಲು ಪ್ರಯತ್ನಿಸಿದಾಗ, ಪಿರಾದುದಾರರು ಚಿನ್ನದ ಸರವನ್ನು ಬಿಗಿಯಾಗಿ ಹಿಡಿದುಕೊಂಡಿದ್ದು, 70 ಗ್ರಾಂ ಚಿನ್ನದ ಸರದಲ್ಲಿ ಸುಮಾರು 20 ಗ್ರಾಂ ಸರವನ್ನು ಕಿತ್ತುಕೊಂಡು ಹೋಗಿರುತ್ತಾನೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಬಾತ್ಮೀದಾದರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:08/11/2024 ರಂದು ನಂದಿನಿಲೇಔಟ್ನ ಕಂಠೀರವ ಸ್ಟಡಿಯೋ ಬಳಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ, ಈ ಪ್ರಕರಣದಲ್ಲಿ ಸರ ಅಪಹರಣ ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾರೆ ಹಾಗೂ ನಂದಿನಿಲೇಔಟ್ ಪೊಲೀಸ್ ಠಾಣಾ ಸರಹದ್ದಿನ ಎರಡು ಕಡೆಗಳಲ್ಲಿ ಸರ ಅಪಹರಣ ಮತ್ತು ದಾವಣಗೆರೆಯಲ್ಲಿ ಮನೆ ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ.
ದಿನಾಂಕ:08/11/2024 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೊಲೀಸ್ ಅಭಿರಕ್ಷೆಗೆ ನೀಡುವಂತೆ ಕೋರಿದರು ಸಹ, ಮಾನ್ಯ ನ್ಯಾಯಾಲಯವು ಆರೋಪಿಗಳಿಬ್ಬರನ್ನು 7 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ನಂತರ ದಿನಾಂಕ:15/11/2024 ರಂದು ತನಿಖಾಧಿಕಾರಿಯವರು, ನ್ಯಾಯಾಂಗ ಬಂಧನದಲ್ಲಿರುವ ಈ ಪ್ರಕರಣದ ಇಬ್ಬರು ಆರೋಪಿಗಳನ್ನು 5 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ನೀಡುವಂತೆ ಕೋರಲಾಗಿದ್ದು, ಇದನ್ನು ಪುರಸ್ಕರಿಸಿದ ಮಾನ್ಯ ನ್ಯಾಯಾಲಯವು ಈ ಇಬ್ಬರು ಆರೋಪಿಗಳನ್ನು 5 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ನೀಡಿರುತ್ತದೆ.

ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಗಳಿಬ್ಬರನ್ನು ಸುದೀರ್ಘವಾಗಿ ವಿಚಾರಣೆ ಮಾಡಲಾಗಿ, ಕಳವು ಮಾಡಿದ ಚಿನ್ನಾಭರಣವನ್ನು ಆರೋಪಿಗಳಿಬ್ಬರ ಪೈಕಿ ಓರ್ವ ಆರೋಪಿಯು ವಾಸವಿರುವ ಭದ್ರಾವತಿಯ ಆತನ ವಾಸದ ಮನೆಯಿಂದ ದಿನಾಂಕ:16/11/2024 ರಂದು 113 ಗ್ರಾಂ ಚಿನ್ನಾಭರಣ ಹಾಗೂ 5,000/- ನಗದನ್ನು ವಶಪಡಿಸಿಕೊಳ್ಳಲಾಯಿತು.
ದಿನಾಂಕ:18/11/2024 ರಂದು ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಎಲ್.ಪಿ.ಜಿ ಗ್ಯಾಸ್ ಬಂಕ್ನ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ 1 ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಯಿತು.
ಈ ಪ್ರಕರಣದ ಆರೋಪಿಗಳಿಬ್ಬರ ವಶದಿಂದ 113 ಗ್ರಾಂ ಚಿನ್ನಾಭರಣ, ಕೆ 5,000/- ನಗದು ಹಾಗೂ 1 ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಮೌಲ್ಯ 8,55,000/-(ಎಂಟು ಲಕ್ಷದ ಐವತ್ತೈದು ಸಾವಿರ ರೂಪಾಯಿ).
ಈ ಪ್ರಕರಣದ ಆರೋಪಿಗಳ ಬಂಧನದಿಂದ 1) ನಂದಿನಿಲೇಔಟ್ ಪೊಲೀಸ್ ಠಾಣೆಯ-2 ಸರಗಳ್ಳತನ ಪ್ರಕರಣ, 2) ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ಪೊಲೀಸ್ ಠಾಣೆಯ-1 ಮನೆ ಕಳವು ಪ್ರಕರಣ ಸೇರಿದಂತೆ ಒಟ್ಟು 3 ಪ್ರಕರಣಗಳು ಪತ್ತೆಯಾಗಿರುತ್ತವೆ.
ದಿನಾಂಕ:19/11/2024 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಮಾನ್ಯ ನ್ಯಾಯಾಲಯವು ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ, ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಸೈದುಲು ಅಡಾವತ್, ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಶ್ರೀ ಹೆಚ್. ಕೃಷ್ಣಮೂರ್ತಿ, ಎಸಿಪಿ ಮಲ್ಲೇಶ್ವರಂ ಉಪ ವಿಭಾಗ ಮತ್ತು ನಂದಿನಿ ಲೇಔಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ಲಕ್ಷ್ಮಣ್ ಜೆ., ರವರ ನೇತೃತ್ವದ ಅಧಿಕಾರಿ/ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.










