ಮಲ್ಲೇಶ್ವರಂನ ಅಪಾರ್ಟ್ಮೆಂಟ್ ವೊಂದರಲ್ಲಿ ವಾಸವಿರುವ ಪಿರಾದುದಾರರು, ದಿನಾಂಕ:06/03/2025 ರಂದು ಆರ್.ಎಂ.ಸಿ.ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ಪತಿಯವರು ದಿನಾಂಕ:02/03/2025 ರಂದು ಆರ್.ಎಂ.ಸಿ.ಯಾರ್ಡ್ ಪೊಲೀಸ್ ಠಾಣಾವ್ಯಾಪ್ತಿಯ ಯಶವಂತಪುರ ಮಾರ್ಕೆಟ್ ಬಳಿ ತರಕಾರಿ ತೆಗೆದುಕೊಳ್ಳಲು ಮಾರ್ಕೆಟ್ಗೆ ಬೆಳಿಗ್ಗೆ ಹೋಗಿರುತ್ತಾರೆ. ಆ ಸಮಯದಲ್ಲಿ ಪಿರಾದುದಾರರ ಪತಿಯ ಐ ಫೋನ್ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಆರ್.ಎಂ.ಸಿ.ಯಾರ್ಡ್ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದಲ್ಲಿ ತನಿಖೆ ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀಧಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:13/03/2025 ರಂದು ಠಾಣಾ ಸರಹದ್ದಿನಲ್ಲಿರುವ ಪ್ಲಾಟಿನಂ ಸಿಟಿ ಅಪಾರ್ಟಮೆಂಟ್ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಐದು ಮೊಬೈಲ್ ಫೋನ್ಗಳ ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗಿ ಈ ಪ್ರಕರಣದಲ್ಲಿ ಮೊಬೈಲ್ ಫೋನ್ನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾರೆ ಹಾಗೂ ಈ ಇಬ್ಬರು ಆರೋಪಿಗಳು ಸೋಲದೇವನಹಳ್ಳಿಯ ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದುಕೊಂಡು, ಇವರ ಸಹಚರರಾದ ಮೂವರು ವ್ಯಕ್ತಿಗಳು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿದ್ದುಕೊಂಡು, ಮೊಬೈಲ್ ಫೋನ್ಗಳನ್ನು ಕಳವು ಮಾಡಿ, ಮಾರಾಟ ಮಾಡಿಕೊಡಲು ತಮಗೆ ನೀಡುತಿದ್ದುದ್ದಾಗಿ ಆರೋಪಿಗಳಿಬ್ಬರು ತಿಳಿಸಿರುತ್ತಾರೆ. ಅಲ್ಲದೆ ಈ ಇಬ್ಬರು ಆರೋಪಿಗಳು ಕಳವು ಮಾಡಿದ ಮೊಬೈಲ್ ಫೋನ್ಗಳು ಹಾಗೂ ಭದ್ರಾವತಿಯ ಮೂವರು ಸಹಚರರು ಕಳವು ಮಾಡಿದ ಮೊಬೈಲ್ ಫೋನ್ಗಳನ್ನು ಇಬ್ಬರು ಆರೋಪಿಗಳು ವಾಸವಿರುವ ಸೋಲದೇವನಹಳ್ಳಿಯ ವಾಸದ ಮನೆಗೆ ತಮಿಳುನಾಡಿನಿಂದ ಓರ್ವ ವ್ಯಕ್ತಿಯು ಬಂದು ಮೊಬೈಲ್ ಫೋನ್ಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾರೆ.

ಈ ಇಬ್ಬರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ, ಕಳವು ಮಾಡಿರುವ 25 ಮೊಬೈಲ್ಗಳನ್ನು ಸೋಲದೇವನಹಳ್ಳಿಯ ವಾಸದ ಮನೆಯಲ್ಲಿಟ್ಟಿದ್ದು, ಅವುಗಳನ್ನು ಖರೀದಿಸಲು ತಮಿಳುನಾಡಿನಿಂದ ಓರ್ವ ಸಹಚರನು ಈ ದಿನ ಬರುವುದಾಗಿ ತಿಳಿಸಿರುತ್ತಾರೆ. ಅದೇ ದಿನ 25 ಮೊಬೈಲ್ ಫೋನ್ಗಳನ್ನು ಖರೀದಿಸಲು ಬಂದ ವ್ಯಕ್ತಿಯನ್ನು ಸೋಲದೇವನಹಳ್ಳಿಯ ಆರೋಪಿಗಳಿಬ್ಬರು ವಾಸಿಸುವ ಮನೆಯಿಂದ ವಶಕ್ಕೆ ಪಡೆಯಲಾಯಿತು.
ದಿನಾಂಕ:14/03/2025 ರಂದು ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 5 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಮೂವರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿ, ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಗೊರಗುಂಟೆ ಪಾಳ್ಯದ ಮೆಟ್ರೋ ನಿಲ್ದಾಣದ ಬಳಿ ಭದ್ರಾವತಿಯ ಓರ್ವ ಸಹಚರನನ್ನು ವಶಕ್ಕೆ ಪಡೆಯಲಾಯಿತು. ವಶಕ್ಕೆ ಪಡೆದ ಸಹಚರನ ಬಳಿಯಿಂದ 25 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಯಿತು.
08:15/03/2025 ರಂದು ಮೆಟ್ರೋ ನಿಲ್ದಾಣದ ಬಳಿ ವಶಕ್ಕೆ ಪಡೆದ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 4 ದಿನಗಳ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು. ಅದೇ ದಿನ ಆರೋಪಿಯು ವಾಸವಿರುವ ಭದ್ರಾವತಿಯ ಮನೆಯಿಂದ 15 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಯಿತು.
ಈ ಪ್ರಕರಣದ ಆರೋಪಿಗಳ ವಶದಿಂದ ಒಟ್ಟು 70 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ * 43,00,000/-(ನಲವತ್ತ ಮೂರು ಲಕ್ಷ ರೂಪಾಯಿ).
ಈ ಪ್ರಕರಣದ ಆರೋಪಿಗಳ ಬಂಧನದಿಂದ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯ ಒಂದು ಮೊಬೈಲ್ ಫೋನ್ ಕಳವು ಪ್ರಕರಣ ಪತ್ತೆಯಾಗಿದ್ದು, ಉಳಿದ 69 ಮೊಬೈಲ್ ಫೋನ್ಗಳ ಮಾಲೀಕರುಗಳ ಪತ್ತೆ ಕಾರ್ಯ ಮುಂದುವರೆದಿದೆ. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
ದಿನಾಂಕ:18/03/2025 ರಂದು ನಾಲ್ವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಸೈದುಲು ಅಡಾವತ್, ಐ.ಪಿ.ಎಸ್ ಹಾಗೂ ಪೀಣ್ಯ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಸದಾನಂದ ತಿಪ್ಪಣ್ಣನವರ್ ಮಾರ್ಗದರ್ಶನದಲ್ಲಿ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಬಿ.ಸಿ ಹರೀಶ್ಹಾಗೂ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









